ಪ್ರಜ್ವಲ್ ರೇವಣ್ಣನಿಗೆ ಸಿಗುತ್ತಾ ಟಿಕೆಟ್?
ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇರುತ್ತದೆ. ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಈ ಬಗ್ಗೆ ಮಾತನಾಡಿದ್ದು, ಪ್ರಜ್ವಲ್ ರಾಜಕೀಯ ಪ್ರವೇಶ ಕುರಿತು ಏನು ಹೇಳಿದ್ದಾರೆ ಗೊತ್ತಾ?
ಬೆಂಗಳೂರು: ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇರುತ್ತದೆ. ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಈ ಬಗ್ಗೆ ಮಾತನಾಡಿದ್ದು, ಪ್ರಜ್ವಲ್ ರಾಜಕೀಯ ಪ್ರವೇಶ ಕುರಿತು ಏನು ಹೇಳಿದ್ದಾರೆ ಗೊತ್ತಾ?
'ಪ್ರಜ್ವಲ್ ರೇವಣ್ಣ ಟಿಕೆಟ್ ನೀಡಬೇಕು ಅನ್ನೋ ಒತ್ತಡ ಇದೆ. ಎಲ್ಲವನ್ನೂ ಗಮನದಲ್ಲಿ ಇಟ್ಕೊಂಡು ಪಾರ್ಟಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮೊದಲಿನಿಂದಲೂ ಕುಮಾರಸ್ವಾಮಿ ಮತ್ತು ರೇವಣ್ಣ ಚುನಾವಣೆಗೆ ನಿಲ್ಲಬೇಕು ಅನ್ನೊ ತೀರ್ಮಾನವಾಗಿತ್ತು. ಜನಾಭಿಪ್ರಾಯದಲ್ಲಿ ಮನೆ, ಮಕ್ಕಳೆಲ್ಲಾ ರಾಜಕೀಯವೆಂದು ಹೇಳಲಾಗ್ತಿತ್ತು. ಹಾಗಾಗಿ ಎಲ್ಲವನ್ನೂ ಗಮನದಲ್ಲಿ ಇಟ್ಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗ್ತದೆ,' ಎಂದು ಹೇಳಿದ್ದಾರೆ.
'ಪ್ರಜ್ವಲ್ ನಿಲ್ಲಬೇಕು ಎಂಬ ಭಾವನೆಯೂ ಇದೆ. ಇದನ್ನ ಚರ್ಚಿಸುವವರೂ ಇದ್ದಾರೆ. ಮುಂಬೈ ಕರ್ನಾಟಕದಲ್ಲಿ ಬೃಹತ್ ರೈತ ಸಮಾವೇಶ, ರಾಯಚೂರು ಭಾಗದಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲಿದ್ದೇವೆ. ಮೊದಲ ಪಟ್ಟಿಯಲ್ಲಿ ಮೂರು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆ ಇದೆ. ಆ ಕ್ಷೇತ್ರಗಳ ಎಲ್ಲ ಆಕಾಂಕ್ಷಿಗಳನ್ನು ಕೂರಿಸಿ, ಮನವೊಲಿಸಿ, ಅಭ್ಯರ್ಥಿಗಳನ್ನ ಅಂತಿಮ ಗೊಳಿಸಲಾಗುತ್ತದೆ,' ಎಂದು ಸ್ಪಷ್ಟಪಡಿಸಿದ್ದಾರೆ.
'ನನ್ನನ್ನ ರಾಮಕೃಷ್ಣ ಹೆಗ್ಡೆ ಬೆಳೆಸಿದ್ದು ಅನ್ನೋ ಸಿಎಂ ಹೇಳಿಕೆ,'ಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ' ಅವರು ದೊಡ್ಡ ವ್ಯಕ್ತಿಗಳು. ಅವರು ಹೇಳಿದ್ದೆಲ್ಲಾ ಸತ್ಯ ಅಲ್ಲವೇ? ಅವರು ಸತ್ಯವನ್ನೇ ಹೇಳುವುದಾಗಿ ಸಂವಿಧಾನದ ಮೇಲೆ ಪ್ರಮಾಣವಚನ ಮಾಡಿದ್ದಾರೆ. ಅಂಥವರ ಬಗ್ಗೆ ಮಾತನಾಡುವಂತಿಲ್ಲ,' ಎಂದು ಮಾರ್ಮಿಕವಾಗಿ ಟಾಂಗ್ ನೀಡಿದರು.