ಕನಸಿನ ಪಕ್ಷದಿಂದ ಉಪೇಂದ್ರ ಹೊರ ಬರಲು ನಿರ್ಧರಿಸಿದ್ದೇಕೆ?
ಹೊಸದೊಂದು ಪರ್ಯಾಯ ರಾಜಕಾರಣ ಆರಂಭಿಸುತ್ತೇವೆ ಎಂದು ಹೇಳಿ, ಕನ್ನಡಿಗರಲ್ಲಿ ಹೊಸ ಭರವಸೆ ಹುಟ್ಟಿಸಿದ ಉಪೇಂದ್ರ ಅರ್ಧದಲ್ಲಿಯೇ ಪಕ್ಷದಿಂದ ಹೊರಬರುತ್ತಿದ್ದಾರೆ.
ಬೆಂಗಳೂರು: ಹೊಸದೊಂದು ಪರ್ಯಾಯ ರಾಜಕಾರಣ ಆರಂಭಿಸುತ್ತೇವೆ ಎಂದು ಹೇಳಿ, ಕನ್ನಡಿಗರಲ್ಲಿ ಹೊಸ ಭರವಸೆ ಹುಟ್ಟಿಸಿದ ಉಪೇಂದ್ರ ಅರ್ಧದಲ್ಲಿಯೇ ಪಕ್ಷದಿಂದ ಹೊರಬರುತ್ತಿದ್ದಾರೆ.
ದಕ್ಷ, ಪ್ರಾಮಾಣಿಕ, ವಿದ್ಯಾವಂತ ಅಭ್ಯರ್ಥಿಗಳನ್ನು ಉಪೇಂದ್ರ ಪಕ್ಷದ ಅಭ್ಯರ್ಥಿಗಳನ್ನಾಗಿ ಆರಿಸಲು ಮುಂದಾಗಿದ್ದರು. ಆದರೆ, ಮಹೇಶ್ ಗೌಡ ಟಿಕೆಟ್ ಮಾರುತ್ತಿದ್ದಾರೆಂದು ಎಂದು ಉಪ್ಪಿ ಆರೋಪಿಸುತ್ತಿದ್ದು, ಈ ವಿಷಯವಾಗಿ ಈ ಇಬ್ಬರ ನಡುವೆ ಭಿನ್ನಮತ ತಲೆದೋರಿದ್ದು, ಪಕ್ಷವನ್ನು ತೊರೆಯಲು ಉಪೇಂದ್ರ ನಿರ್ಧರಿಸಿದ್ದಾರೆನ್ನಲಾಗುತ್ತಿದೆ.
ಚುನಾವಣಾ ಅಭ್ಯರ್ಥಿಗಳ ಅಂತಿಮ ಆಯ್ಕೆ ವಿಷಯವಾಗಿ ಉಪೇಂದ್ರ ಅವರೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈ ವಿಷಯವಾಗಿ ಭಿನ್ನಾಭಿಪ್ರಾಯ ಕೇಳಿ ಬಂದಿತ್ತು. 'ಪಕ್ಷವನ್ನು ನೋಂದಾಯಿಸಿದ್ದು ನಾನು,' ಎಂದು ಹೇಳಿದ ಮಹೇಶ್ ಗೌಡ ಹಾಗೂ ಶಿವಕುಮಾರ್, ಉಪ್ಪಿಯನ್ನೇ ಪಕ್ಷದಿಂದ ಹೊರ ಹಾಕಲು ನಿರ್ಧರಿಸಿದ್ದರು.
ಮುಂದಿನ ನಡೆ ಏನು?
ಹೊಸ ರಾಜಕೀಯ ಅಲೆ ಸೃಷ್ಟಿಸುವುದಾಗಿ ಹೇಳಿ, ರಾಜಕೀಯ ಪ್ರವೇಶಿಸಿದ ಉಪೇಂದ್ರ ಹಾಗೂ ಇವರ ಬೆಂಬಲಿಗರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸುವ ಸಾಧ್ಯತೆ ಇದೆ.
ಉಪೇಂದ್ರ ಅವರು ಮತ್ತೊಂದು ಹೊಸ ಪಕ್ಷವನ್ನು ಸ್ಥಾಪಿಸಿ, ಚುನಾವಣೆ ಎದುರಿಸುವುದು ಕಷ್ಟವಲ್ಲ. ಆದರೆ, ಚುನಾವಣಾ ಆಯೋಗದ ಸಿಗುವುದು ಕಷ್ಟ. ಮಾನ್ಯತೆ ಇಲ್ಲದ ಕಾರಣ, ಇವರನ್ನು ಪಕ್ಷೇತರ ಅಭ್ಯರ್ಥಿಯಂದೇ ಪರಿಗಣಿಸಲಾಗುತ್ತದೆ. ಕೆಪಿಜೆಪಿಯಿಂದ ಉಪೇಂದ್ರ ಹೊರ ನಡೆದಿದ್ದೇ ಆದಲ್ಲಿ, ಉಪೇಂದ್ರರಿಗೆ ಯಾವ ನಷ್ಟವೂ ಇಲ್ಲ. ಆದರೆ, ಪಕ್ಷಕ್ಕೆ ಜನರು ಮನ್ನಣೆ ನೀಡುವುದು ಕಷ್ಟ, ಎಂದು ವಿಶ್ಲೇಷಿಸಲಾಗುತ್ತಿದೆ.