ರಾಜ್ಯಕ್ಕೆ ಎರಡೂವರೆ ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟಿದೆ. ಅದರ ಲೆಕ್ಕ ಕೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಲೆಕ್ಕ ಕೇಳಲು ನಿಮಗೆ ಏನ್ ಅಧಿಕಾರ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು (ನ.08): ರಾಜ್ಯಕ್ಕೆ ಎರಡೂವರೆ ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟಿದೆ. ಅದರ ಲೆಕ್ಕ ಕೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಲೆಕ್ಕ ಕೇಳಲು ನಿಮಗೆ ಏನ್ ಅಧಿಕಾರ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ತಾಲೂಕಿನ ಮುಗುಳುವಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಲು ಆಗಮಿಸಿದ್ದ ಅವರು, ನಮ್ಮ ರಾಜ್ಯದ ಜನ ಕೊಡುತ್ತಿರುವ ತೆರಿಗೆ ಹಣದಲ್ಲಿ ಸಿಂಹಪಾಲು ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ನಮ್ಮ ಪಾಲನ್ನು ಕೊಟ್ಟಿದ್ದೀರಾ ಅಷ್ಟೇ ವಿಶೇಷವಾಗಿ ಒಂದು ನಯಾ ಪೈಸೆ ನೀವು ಕೊಟ್ಟಿಲ್ಲ. ಆದ್ದರಿಂದ ಲೆಕ್ಕ ಕೇಳಲು ನಿಮಗೇನು ಅಧಿಕಾರ ಇದೆ ಎಂದು ಹೇಳಿದರು.

ನೋಟು ಅಮಾನ್ಯೀಕರಣ ಮಾಡುವುದರಿಂದ ಭಯೋತ್ಪಾದನೆ ನಿರ್ನಾಮವಾಗುತ್ತದೆ ಎಂಬ ಪ್ರಧಾನಿ ಮೋದಿ ಅವರ ಲೆಕ್ಕಚಾರ ತಲೆ ಕೆಳಗಾಗಿದೆ. ಅಂದು ಹೊಗಳಿದ್ದ ಆರ್‌ಬಿಐ ಗೌರ್ನರ್ ಅವರೇ ಇಂದು ಟೀಕೆ ಮಾಡುತ್ತಿದ್ದಾರೆ. ಜನರ ನಂಬಿಕೆ ಹುಸಿಯಾಗಿದೆ. ಹೊಸ ನೋಟುಗಳ ಮುದ್ರಣಕ್ಕೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿದೆ. ರೈತರು,ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಗೆ ಬಿದ್ದರು ಎಂದು ನೆನಪು ಮಾಡಿಕೊಂಡರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸರ್ಕಾರಗಳು ತೆಗೆದು ಕೊಂಡ ಕ್ರಮಗಳಿಂದ ದೇಶದ ಅಭಿವೃದ್ಧಿ ಯಲ್ಲಿ ಭಾರಿ ಹಿನ್ನಡೆಯಾಗಿದೆ. ಸಾಧಕ- ಬಾಧಕಗಳನ್ನು ಯೋಚಿಸದೆ ಜಿಎಸ್‌ಟಿ ಜಾರಿಗೆ ತಂದರು.

ಅನಂತರದಲ್ಲಿ ಕೆಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಸಿದರು. ಇದೀಗ ಇದೊಂದು ಅವೈಜ್ಞಾನಿಕ ಕ್ರಮ ಎಂಬುದು ಅರ್ಥ ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಇಳಿಕೆಯಾಗಿ ಕೇಂದ್ರಕ್ಕೆ ಐದಾರೂ ಲಕ್ಷ ಕೋಟಿ ರುಪಾಯಿ ಉಳಿತಾಯವಾಗಿದ್ದರೂ ಪೆಟ್ರೋಲ್ ದರ ಏರಿಕೆ ಮಾಡಿದೆ. ಸ್ಮಾರ್ಟ ಸಿಟಿ, ಸ್ವಚ್ಛ ಭಾರತ್, ಆದರ್ಶ ಗ್ರಾಮಗಳ ಯೋಜನೆಗಳು ವಿಫಲವಾಗಿವೆ ಎಂದರು.

ಗ್ರಾಮ ವಾಸ್ತವ್ಯದ ಉದ್ದೇಶ ಕುರಿತು ಕೇಳಿದ ಪ್ರಶ್ನೆಗೆ ಗ್ರಾಮಗಳಿಗೆ ಭೇಟಿ ನೀಡಿದರೆ ಜನಸಂಪರ್ಕ ಹತ್ತಿರವಾಗುತ್ತದೆ. ಅವರ ಸಮಸ್ಯೆಗಳನ್ನು ಕೇಳಿದರೆ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗಲಿದೆ ಎಂದು ಹೇಳಿದರು.

ಕೆಲವು ಜಯಂತಿಗಳನ್ನು ಸರ್ಕಾರವೇ ನಡೆಸುತ್ತಿದೆ. ಇದರ ಹಿಂದಿರುವ ಉದ್ದೇಶ ಆಯಾಯ ಸಮಾಜದ ಸಂಘಟಕರನ್ನು ತೃಪ್ತಿಗೊಳಿಸುವುದು. ಈ ರೀತಿಯ ಕಾರ್ಯಕ್ರಮ ಮಾಡುವ ಬದಲು ಆ ಜನರ ಆರ್ಥಿಕ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ತಿಳಿಸಿದರು.