ಶ್ರೀರಾಮ ಸೇನೆ ನೇತೃತ್ವದಲ್ಲಿ ನಾಳೆ ಶೋಭಯಾತ್ರೆ
ಶ್ರೀರಾಮ ಸೇನೆ ನೇತೃತ್ವದಲ್ಲಿ ನಾಳೆ ಶೋಭಾಯಾತ್ರೆ, ದತ್ತಮಾಲಾ ಅಭಿಯಾನ ಹಾಗೂ ದತ್ತಜಯಂತಿ ನಡೆಯಲಿದೆ.
ಚಿಕ್ಕಮಗಳೂರು (ನ.19): ಶ್ರೀರಾಮ ಸೇನೆ ನೇತೃತ್ವದಲ್ಲಿ ನಾಳೆ ಶೋಭಾಯಾತ್ರೆ, ದತ್ತಮಾಲಾ ಅಭಿಯಾನ ಹಾಗೂ ದತ್ತಜಯಂತಿ ನಡೆಯಲಿದೆ.
70 ಮಂದಿ ನಾಗಸಾಧು, 10 ಮಠಾಧೀಶರು ಸೇರಿದಂತೆ ದತ್ತಮಾಲೆ ಧರಿಸಿರುವ ಸುಮಾರು 5 ಸಾವಿರ ಮಂದಿ ದತ್ತಭಕ್ತರನ್ನು ಶ್ರೀರಾಮ ಸೇನೆ ನಿರೀಕ್ಷಿಸಿದೆ. ಜಿಲ್ಲೆಯಲ್ಲಿ ಬಂದೋಬಸ್ತಿಗಾಗಿ 11 ಡಿಎಆರ್, 7 ಕೆಎಸ್ಆರ್ಪಿ, 1757 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ನಿಯೋಜನೆ ಮಾಡಿದೆ.
ದತ್ತಮಾಲಾ ಅಭಿಯಾನದ ಅಂಗವಾಗಿ ಸಂಪ್ರದಾಯದಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ನಾಗಸಾಧುಗಳು ಹಾಗೂ ದತ್ತಮಾಲಾಧಾರಿಗಳು ಶನಿವಾರ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಿದರು.
ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ದತ್ತಪೀಠ ಹಿಂದುಗಳಿಗೆ ಒಪ್ಪಿಸಬೇಕು. ಈ ಸಂಬಂಧ ಮನೆ ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಸ್ಲಿಂ ವೋಟಿಗೋಸ್ಕರ ಸರ್ಕಾರ ಈ ಪೀಠವನ್ನು ಹಿಂದುಗಳಿಗೆ ಒ ಪ್ಪಿಸುತ್ತಿಲ್ಲ, ಈ ಅನ್ಯಾಯ ಸರಿಯಲ್ಲ, ಇದೇ ಧೋರಣೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸರಿಯಾದ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶೋಭಾಯಾತ್ರೆ
ಭಾನುವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಶ್ರೀ ಕಾಮಧೇನು ಕ್ಷೇತ್ರದಿಂದ ಶೋಭಾಯಾತ್ರೆ ಹೊರಡಲಿದ್ದು, ಈ ಯಾತ್ರೆ, ಬಸವನಹಳ್ಳಿ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣಕ್ಕೆ ತಲುಪಿದ ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ಇದರಲ್ಲಿ ನಾಗಸಾಧುಗಳು, ಮಠಾಧೀಶರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ದತ್ತ ಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ. ನಂತರದಲ್ಲಿ ವಾಹನದಲ್ಲಿ ದತ್ತಪೀಠಕ್ಕೆ ತೆರಳಿ ಅಲ್ಲಿ ದತ್ತಪಾದುಕೆಗಳ ದರ್ಶನ ಪಡೆದು, ಪೀಠದ ವ್ಯಾಪ್ತಿಯ ಹೊರಗೆ ನಡೆಯಲಿರುವ ಧಾರ್ಮಿಕ ಸಭೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಭಗವಧ್ವಜಗಳನ್ನು ಹಾಕಿ ಸಿಂಗಾರಗೊಳಿಸಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ಮತ್ತೆ ಕೇಸರಿ ವೈಭವ ಮರುಕಳಿಸಿದೆ.
ಬಂದೋಬಸ್ತ್
ದತ್ತಮಾಲಾ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 1757 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಸ್ಪಿ, ಎಎಸ್ಪಿ, 4 ಮಂದಿ ಡಿವೈಎಸ್ಪಿ, 18 ಮಂದಿ ಸಿಪಿಐ, 66 ಮಂದಿ ಪಿಎಸ್ಐ, 137 ಎಎಸ್ಐ, 1065 ಪಿ.ಸಿ.ಎಚ್.ಸಿ., 32ಮಹಿಳಾ ಪೊಲೀಸರು, 433 ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರ ಜತೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ 21ಚೆಕ್ ಪೋಸ್ಟ್ಗಳನ್ನು ತೆರೆದಿದೆ. ದೇವಾಲಯ, ಮಸೀದಿ, ಚರ್ಚಗಳು ಹಾಗೂ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದೆ. ಬಂದೋಬಸ್ತ್ ಹಿನ್ನಲೆಯಲ್ಲಿ ಶೋಭಾಯಾತ್ರೆ ನಡೆಯುವ ಮಾರ್ಗದಲ್ಲಿ ಪೊಲೀಸರು ಶನಿವಾರ ಪಥಸಂಚಲ ಮಾಡಿದರು.
ದತ್ತಪೀಠ ಸೇರಿದಂತೆ ಗಿರಿ ಪ್ರದೇಶದಲ್ಲಿ ಭಾನುವಾರ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಸಂಬಂಧ ನಗರದ ಪ್ರವೇಶದಲ್ಲಿರುವ ಚೆಕ್ ಪೋಸ್ಟ್ಗಳ ಬಳಿ ಪ್ರವಾಸಿಗರ ಗಮನ ಸೆಳೆಯಲು ಸೂಚನಾ ಫಲಕಗಳನ್ನು ಹಾಕಲಾಗಿದೆ.
ಜಿಲ್ಲಾಡಳಿತದ ನಿಬಂಧನೆಗಳು
1.ದತ್ತಮಾಲಾಧಾರಣೆ, ಶೋಭಾಯಾತ್ರೆ, ಬೈಕ್ ಜಾಥಾ ಸಂದರ್ಭಗಳಲ್ಲಿ ಕಾರ್ಯಕ್ರಮಕ್ಕೆ ಬಳಸುವ ಧಾರ್ಮಿಕ ಸಂಸ್ಥೆ ಅಥವಾ ಸ್ಥಳದಲ್ಲಿ ಅವುಗಳ ಕಟ್ಟುಪಡು, ಪದ್ದತಿ, ನೀತಿ ನಿಯ ಮಗಳಿಗೆ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.
2. ಸಂಘಟನಾಕಾರರು, ದತ್ತಮಾಲಾಧಾರಿಗಳು ಹಾಗೂ ಭಕ್ತಾಧಿಗಳು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಮಾರ್ಗದಿಂದ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಐ.ಡಿ ಪೀಠಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಮಾರ್ಗಗಳಲ್ಲಿ ಯಾವುದೇ ಘೋಷಣೆ, ಅವಾಚ್ಯ ಶಬ್ಧಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಸ್ಫೋಟಕ ಬಳಕೆ, ಮದ್ಯಪಾನ ಬಳಕೆ, ಬ್ಯಾನರ್-ಭಿತ್ತಿಪತ್ರಗಳ ಪ್ರದರ್ಶನ ಪ್ರತಿಕೃತಿ ದಹನ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ, ರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ಮತ್ತು ಸಂಚಾರ ಹಾಗೂ ಸಂಪರ್ಕಕ್ಕೆ ಯಾವುದೇ ಅಡತಡೆ ಮಾಡುವುದನ್ನು ನಿಷೇಧಿಸಿದೆ.