ಸಿಬಿಐ ಅಧಿಕಾರಿಗಳು ನೀಡಿದ ಕಾಟಕ್ಕೆ ಬೇಸತ್ತ ವಿದ್ಯಾರ್ಥಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ (ಅ.22): ಸಿಬಿಐ ಅಧಿಕಾರಿಗಳು ನೀಡಿದ ಕಾಟಕ್ಕೆ ಬೇಸತ್ತ ವಿದ್ಯಾರ್ಥಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡಿ ತಾಲೂಕಿನ ಕಾರ್ತಾಳ ಗ್ರಾಮದ 22 ವರ್ಷದ ಸಂಜು ಗುಡ್ಡದ್ ವಿಷ ಸೇವಿಸಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಸಿದ್ದರಾಮ ಮಾವಿನಮರದ ಎಂಬಾತ ಸಂಜುನ ಸ್ನೇಹಿತ. ಸಿದ್ದರಾಮ ಶಿಕ್ಷಕನಾಗಿದ್ದು, ವಿದ್ಯಾರ್ಥಿನಿಯೊಂದಿಗೆ ಪ್ರೀತಿ ಮಾಡಿ ಆಕೆಯೊಂದಿಗೆ ಓಡಿ ಹೋಗಿದ್ದ. ಆತ ಆಕೆಯೊಂದಿಗೆ ಓಡಿ ಹೋಗಿ ಮೂರು ವರ್ಷಗಳೇ ಕಳೆದಿವೆ. ಈ ಬಗ್ಗೆ ವಿದ್ಯಾರ್ಥಿನಿ ಪೋಷಕರು ಕಲಬುರ್ಗಿ ಹೈಕೋರ್ಟ್​ ಸಂಚಾರಿ ಪೀಠದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಹೆಬೀಯಸ್ ಕಾರ್ಫಸ್ ದೂರು ನೀಡಿದ್ದರು.

ಕೋರ್ಟ್​ ಬೆಳಗಾವಿ ವಿಭಾಗದ ಐಜಿಪಿ ಹಾಗೂ ವಿಜಯಪುರ ಜಿಲ್ಲಾ ಎಸ್ಪಿ ಅವರನ್ನು ಕರೆದು ಚೀಮಾರಿ ಹಾಕಿತ್ತು. ನಂತರ ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್​ನ್ನು ಕೋರ್ಟ್​ ಸಿಬಿಐಗೆ ನೀಡಿದೆ. ಸಿಬಿಐ ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಬಿಡಾರ ಹೂಡಿದ್ದು, ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಶಿಕ್ಷಕ ಸಿದ್ದರಾಮನ ಹುಡುಕಾಟ ನಡೆಸುವ ಬದಲು ಆತನ ಸ್ನೇಹಿತರನ್ನು ಕರೆದು ವಿಚಾರಣೆ ನಡೆಸುತ್ತಿದೆ. ಅದರಲ್ಲೂ ಸಿದ್ದರಾಮನ ರೂಂಮೇಟ್ ಆಗಿದ್ದ ಸಂಜುಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.