ಜಮೀನು ಖರೀದಿ ವ್ಯವಹಾರದ ಸಂಧಾನಕ್ಕೆ ಕರೆದು ಹತ್ಯೆ ಯತ್ನ ನಡೆಸಿದ್ದು, ಆಶ್ಚರ್ಯಕರ ರೀತಿಯಲ್ಲಿ ತಪ್ಪಿಸಿಕೊಂಡು ಬಂದ ಘಟನೆ ಬೆಂಗಳೂರು ದಕ್ಷಿಣ ಜಿಗಣಿ ಸಮೀಪ ನಡೆದಿದೆ.

ಆನೇಕಲ್: ಜಮೀನು ಖರೀದಿ ವ್ಯವಹಾರದ ಸಂಧಾನಕ್ಕೆ ಕರೆದು ಹತ್ಯೆ ಯತ್ನ ನಡೆಸಿದ್ದು, ಆಶ್ಚರ್ಯಕರ ರೀತಿಯಲ್ಲಿ ತಪ್ಪಿಸಿಕೊಂಡು ಬಂದ ಘಟನೆ ಬೆಂಗಳೂರು ದಕ್ಷಿಣ ಜಿಗಣಿ ಸಮೀಪ ನಡೆದಿದೆ. ನಾಗ ನಾಯಕನಹಳ್ಳಿ ನಿವಾಸಿ, ಬಿಜೆಪಿ ನಗರ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮುನಿರಾಜುಗೌಡ, ತನ್ನ ಹತ್ಯೆಗೆ ಯತ್ನ ನಡೆದಿತ್ತು ಎಂದು ಠಾಣೆಗೆ ದೂರು ನೀಡಿದ್ದಾರೆ.

Add Asianetnews Kannada as a Preferred SourcegooglePreferred

10 ಕ್ಕೂ ಹೆಚ್ಚು ಸುಪಾರಿ ಕಿಲ್ಲರ್‌ಗಳು ರಾಜಿ ಸಂಧಾನ ನೆಪದಲ್ಲಿ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಹಲ್ಲೆ ಪ್ರಯತ್ನ ನಡೆದಾಗ ಆಶ್ಚರ್ಯಕರ ರೀತಿಯಲ್ಲಿ ತಪ್ಪಿಸಿಕೊಂಡು ಬಂದ ಗೌಡ, ಜಿಗಣಿ ಠಾಣೆಯಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾರೆ.

ಪೊಲೀಸರು ಹತ್ತೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುಪಾರಿಗೆ ಕಾರಣ: ಮುನಿರಾಜು ಗೌಡರಿಂದ ಕೇರಳ ಮೂಲದ ಅರಾಕ್ಟ್ ಬಿಲ್ಡರ್ಸ್ ಕಂಪನಿ ಜಿಗಣಿ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿತ್ತು. ವ್ಯವಹಾರದಲ್ಲಿ ವಿವಾದ ಉಂಟಾಗಿ ಹಲವು ಬಾರಿ ರಾಜಿ ಪಂಚಾಯ್ತಿಗಳು ನಡೆದಿದ್ದವು. ಒಂದು ಹಂತದಲ್ಲಿ ಪರಿಸ್ಥಿತಿ ಕೈ ಮೀರಿದಾಗ ಠಾಣೆಗೆ ಬಂದ ಮುನಿರಾಜುಗೌಡ ದೂರು ನೀಡಿದ್ದರು.

ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರ ಮನವೊಲಿಸಿ ರಾಜಿ ಸಂಧಾನಕ್ಕೆ ಪ್ರಯತ್ನಪಟ್ಟರು. ಹಲವು ಬಾರಿ ಸಂಧಾನ ನಡೆದರೂ ಸ್ಪಷ್ಟ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಶನಿವಾರ ಕೂಡ ಠಾಣೆಯಲ್ಲಿ ರಾಜಿಗೆ ಬರಲು ತಿಳಿಸಿದ ಬಿಲ್ಡರ್ ಕೇರಳದಿಂದ ಸುಪಾರಿ ಕಿಲ್ಲರ್ಸ್ಗಳನ್ನು ಜೊತೆಗೆ ಕರೆ ತಂದಿದ್ದರು ಎಂದು ಗೌಡ ಆರೋಪಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಜಿಗಣಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಕೃತ್ಯಕ್ಕೆ ಬಳಸಿದ ಕಾರು, ಹಿಂಬದಿ ಸೀಟಿನಲ್ಲಿದ್ದ ಕಟ್ಟಿಗೆಯ ತುಂಡುಗಳು ಹಾಗೂ ಕಬ್ಬಿಣದ ಸರಳುಗಳನ್ನು ವಶಕ್ಕೆ ಪಡೆಯಲಾಗಿದೆ.