ವಿಚಾರಣಾಧೀನ ಕೈದಿ ಕೊಲೆಯಲ್ಲಿ ಸಂಘ ಪರಿವಾರ ಕೈವಾಡ: ಆರೋಪ
ಮೈಸೂರಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮುಸ್ತಾಫ ಕೊಲೆ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ (ನ.14): ಮೈಸೂರಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮುಸ್ತಾಫ ಕೊಲೆ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದಲ್ಲಿ ಪ್ರತಿಭಟನಾಕಾರರು, ಮೈಸೂರಿನ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮುಸ್ತಾಫ ಕೊಲೆಯನ್ನು ಪಿಎಫ್ಐ ಖಂಡಿಸುತ್ತದೆ. ಮುಸ್ತಾಫ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದವರು. ನ್ಯಾಯಪರ ಹೋರಾಟ ಮಾಡುತ್ತಿದ್ದರು. ಇತ್ತೀಚೆಗೆ ಮೂಡಬಿದ್ರೆಯಲ್ಲಿ ನಡೆದ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ತನಿಖೆಯ ಹೆಸರಿನಲ್ಲಿ ಈ ಅಮಾಯಕನನ್ನು ಬಂಧಿಸಲಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘ ಪರಿವಾರ ಟಿಪ್ಪು ಜಯಂತಿಯ ವೇಳೆ ಶಾಂತಿಯನ್ನು ಕದಡುವ ಹುನ್ನಾರ ಮಾಡಿತು. ಈ ಪ್ರಚೋದನೆಯಿಂದಲೇ ಈ ಕೊಲೆಗೆ ಕುಮ್ಮಕ್ಕು ನಡೆದಿದೆ. ಸಂಸದ ಪ್ರತಾಪ ಸಿಂಹ ಜೈಲಿಗೆ ಆಗಾಗ ಭೇಟಿ ನೀಡಿರುವುದು ಅನುಮಾನಾಸ್ಪದವಾಗಿದೆ. ಈ ಹತ್ಯೆಯಲ್ಲಿ ಅವರು ಶಾಮೀಲಾಗಿರುವ ಸಾಧ್ಯತೆ ಇದೆ. ಒಟ್ಟಾರೆ ಇದು ಸಂಘ ಪರಿವಾರದ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಜೈಲಿನೊಳಗೆಯೇ ಮಾರಕಾಸ್ತ್ರ ಬಳಸಿ ನಡೆದಿರುವ ಈ ಕೊಲೆಯ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಕರ್ತವ್ಯಲೋಪ ಎಸಗಿದ ಜೈಲು ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು. ಈ ಕೊಲೆಗೆ ಸರ್ಕಾರವೇ ನೇರ ಹೊಣೆ. ಮೃತರ ಕುಟುಂಬಕ್ಕೆರೂ.50 ಲಕ್ಷ ಪರಿಹಾರ ನೀಡಬೇಕು. ಕೊಲೆಯ ಹಿಂದಿರುವ ಷಡ್ಯಂತ್ರವನ್ನು ಬಯಲು ಮಾಡಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.