ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ನಟಿ ರಮ್ಯಾರ ತಾಯಿ ರಂಜಿತಾ, ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ಕೇಳಿ ಬಂದಿವೆ.
ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ನಟಿ ರಮ್ಯಾರ ತಾಯಿ ರಂಜಿತಾ, ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ಕೇಳಿ ಬಂದಿವೆ.
28 ವರ್ಷಗಳಿಂದ ಕಾಂಗ್ರೆಸ್ಗಾಗಿ ದುಡಿದ್ದರೂ ಪಕ್ಷ ತಮ್ಮನ್ನು ಗುರುತಿಸದ ಕಾರಣ ಬೇಸರಿಸಿ ರಂಜಿತಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಪ್ತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
‘ಮಗಳು ರಮ್ಯಾ ಈಗ ಉನ್ನತ ಸ್ಥಾನದಲ್ಲಿ ಇದ್ದಾಳೆ. ಮಕ್ಕಳು ದೊಡ್ಡವರಾದ ಮೇಲೆ ಅವರ ಜವಾಬ್ದಾರಿ, ಹೊಣೆಯೇ ಬೇರೆ ಬೇರೆ ಆಗಿರುತ್ತದೆ. ಮಗಳ ಬಗ್ಗೆ ಯಾವುದೇ ಆಕ್ಷೇಪಣೆ, ತಕರಾರೂ ಇಲ್ಲ. ಆದರೆ ನಾನೂ ಕೂಡ ಕಾಂಗ್ರೆಸ್ನಲ್ಲಿ ಕಳೆದ 28 ವರ್ಷದಿಂದ ಸೇವೆ ಸಲ್ಲಿಸಿದ್ದೇನೆ. ನನಗೂ ಪಕ್ಷದಲ್ಲಿ ಯಾವುದಾದರೂ ದುಡಿಯಲು ಒಂದು ಸಣ್ಣ ಸ್ಥಾನಬೇಕು ಎನ್ನುವ ಅಪೇಕ್ಷೆ ಇದ್ದೇ ಇದೆ.
ಆದರೆ ಪಕ್ಷದವರು ಇದುವರೆಗೂ ನನ್ನನ್ನು ಗುರುತಿಸಿಲ್ಲ. ಎಷ್ಟು ದಿನ ಅಂತ ಕಾಯುವುದು’ ಎಂದು ತಮ್ಮ ಆಪ್ತರ ಬಳಿ ರಂಜಿತಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ‘ಮಂಡ್ಯದಲ್ಲಿ ಅಂಬರೀಶ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಯಸಲ್ಲ. ಅಂಬರೀಶ್ ಕಣಕ್ಕೆ ಇಳಿಯುತ್ತಾರೆ ಎಂಬ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಕೂಡ ಹಾಕಿಲ್ಲ.
ಆದರೆ, ಪಕ್ಷದಿಂದ ಹೊರ ಬಂದು ನೇರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೆ ತಪ್ಪೇನು? ರಮ್ಯಾ ಜತೆ ಚರ್ಚೆ ನಡೆಸಿಲ್ಲ. ನಾನು ಸ್ವತಂತ್ರವಾಗಿದ್ದೇನೆ. ಈ ನಿರ್ಧಾರ ಕೈಗೊಂಡರೆ ತಪ್ಪೇನು’ ಎಂದಿದ್ದಾರೆ.

Last Updated 11, Apr 2018, 12:56 PM IST