ಹಾರೋಹಳ್ಳಿ ಜನರ ಜೊತೆಗೆ ನಾವಿದ್ದೇವೆ. ಎಂತಹ ಹೋರಾಟಕ್ಕೂ ಭಯ ಪಡುವುದು ಬೇಡ. ಕಸಾಯಿಖಾನೆಗೆ ಸಂಪೂರ್ಣ ವಿರೋಧವಿದೆ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಸಭೆಯಲ್ಲಿ ನಿರ್ಣಯ ಮಾಡಿದರು.

ಕನಕಪುರ(ಮಾ. 25): ಸಾಧು-ಸಂತರು, ಹೋರಾಟಗಾರರು ಹಾಗೂ ಪ್ರಜೆಗಳ ಸಮಾಧಿಯ ಮೇಲೆ ಹಾರೋಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಧುನಿಕ ಕಸಾಯಿಖಾನೆ ಯೋಜನೆಯನ್ನು ಕೈ ಬಿಡದಿದ್ದರೆ ರಕ್ತಪಾತದಂತಹ ಹೋರಾಟಕ್ಕೂ ಸಿದ್ಧವಿದ್ದೇವೆ. ಅಂತಹ ಪರಿಸ್ಥಿತಿಗೆ ಅವಕಾಶ ನೀಡಬೇಡಿ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾರೋಹಳ್ಳಿಯಲ್ಲಿ ಮಾತ್ರವಲ್ಲ ರಾಜ್ಯದ ಯಾವುದೇ ಮೂಲೆಯಲ್ಲಿಯೂ ಕಸಾಯಿಖಾನೆ ಸ್ಥಾಪನೆ ಆಗಬಾರದು. ಇಲ್ಲದಿದ್ದರೆ ಎಂತಹ ಹೋರಾಟಕ್ಕೂ ನಾವೆಲ್ಲ ಸಿದ್ಧರಾಗಿದ್ದೇವೆ. ಸ್ಥಳೀಯ ಗ್ರಾ.ಪಂ. ಕಸಾಯಿಖಾನೆ ಸ್ಥಾಪನೆಗೆ ಪರವಾನಗಿ ನೀಡಿಲ್ಲ. ಇಲ್ಲಿನ ಜನರು ದಿಟ್ಟಮನಸ್ಸಿನವರಾಗಿದ್ದು ಹಣ, ಬೆದರಿಕೆಗಳಿಗೆ ಬಗ್ಗುವುದಿಲ್ಲ. ಇವರ ಭಾವನೆಗಳಿಗೆ ಬೆಲೆ ನೀಡದ ಬಿಬಿಎಂಪಿ ಕಸಾಯಿಖಾನೆ ಸ್ಥಾಪನೆಗೆ ಮುಂದಾಗಿರುವುದು ಪ್ರಜಾಪ್ರಭುತ್ವದ ವಿರೋಧಿ. ಈ ಅಧಿಕಾರ ಅವರಿಗೆ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಬೆಂಗಳೂರಿನ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಸ್ಥಾಪಿಸಲು ಮುಂದಾಗಿದ್ದೀರಿ. ಇಲ್ಲಿನವರು ಮನುಷ್ಯರಲ್ಲವೇ. ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಾರೋಹಳ್ಳಿ ಜನರ ಜೊತೆಗೆ ನಾವಿದ್ದೇವೆ. ಎಂತಹ ಹೋರಾಟಕ್ಕೂ ಭಯ ಪಡುವುದು ಬೇಡ. ಕಸಾಯಿಖಾನೆಗೆ ಸಂಪೂರ್ಣ ವಿರೋಧವಿದೆ ಎಂದು ರಾಘವೇಶ್ವರ ಭಾರತಿ ಸ್ವಾಮೀಜಿ ಸಭೆಯಲ್ಲಿ ನಿರ್ಣಯ ಮಾಡಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in