ಆ ದಂಪತಿಗೆ ಇದ್ದಿದ್ದು ಒಂದೇ ಗಂಡು ಮಗು. ದುರದೃಷ್ಟವಶಾತ್ ಆ ಮಗು ಅಪಘಾತಕ್ಕೀಡಾಗಿ ವೈದ್ಯರು ಬದುಕುಳಿಯುವುದೇ ಕಷ್ಟ ಎಂದಾಗ ಆ ಮಗುವಿನ ಪೋಷಕರು ದೇಹದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ನೇತ್ರದಾನ ಮಾಡಿ ಮತ್ತೊಂದು ಜೀವದ ಬಾಳಿಗೆ ಬೆಳಕು ನೀಡಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ದಾವಣಗೆರೆ(ಎ.20): ಆ ದಂಪತಿಗೆ ಇದ್ದಿದ್ದು ಒಂದೇ ಗಂಡು ಮಗು. ದುರದೃಷ್ಟವಶಾತ್ ಆ ಮಗು ಅಪಘಾತಕ್ಕೀಡಾಗಿ ವೈದ್ಯರು ಬದುಕುಳಿಯುವುದೇ ಕಷ್ಟ ಎಂದಾಗ ಆ ಮಗುವಿನ ಪೋಷಕರು ದೇಹದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ನೇತ್ರದಾನ ಮಾಡಿ ಮತ್ತೊಂದು ಜೀವದ ಬಾಳಿಗೆ ಬೆಳಕು ನೀಡಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಂಭಟ್ರಹಳ್ಳಿ ಯಲ್ಲಿ ಆರು ವರ್ಷದ ಮಗನನ್ನು ಅಪಘಾತದಲ್ಲಿ ಕಳೆದುಕೊಂಡ ನೋವಿನಲ್ಲೂ ಪೋಷಕರು ದೇಹದಾನ ಮಾಡಿ ಮಾದರಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ತಂದೆ ನಾಗರಾಜ ಆರು ವರ್ಷದ ಮಗ ಗೌತಮನೊಂದಿಗೆ ಹೋಗುತ್ತಿರುವಾಗ ಮಗನಿಗೆ ಬೋಲೋರೋ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಮಗನ ತಲೆಗೆ ಬಲವಾದ ಪೆಟ್ಟು ಬಿದ್ದು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಬದುಕುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ. ಇನ್ನೇನು ಮಾಡುವುದು ಎಂದು ಮಗುವಿನ ಅಂಗಾಂಗ ದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಅದರಂತೆ ಬಾಲಕನ ಕಣ್ಣುಗಳನ್ನ ಪೋಷಕರು ದಾನ ಮಾಡಿದ್ದಾರೆ.
ಪೋಷಕರ ಅಭಿಲಾಷೆಯಂತೆ ದಾವಣಗೆರೆ ನಯನಾ ಸ್ಪೆಶಾಲಿಟಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಆ ಮಗುವಿನ ಕಣ್ಣುಗಳ್ನು ಸಂಗ್ರಹಿಸಿದ್ದಾರೆ. ಪೋಷಕರಿಗೆ ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ ಮತ್ತೊಬ್ಬ ಅಂಧನ ಬಾಳಿಗೆ ಕಣ್ಣು ಬೆಳಕು ನೀಡುತ್ತದೆ ಎಂಬ ಸಮಾಧಾನ ಇನ್ನೊಂದು ಕಡೆ.
ಮಕ್ಕಳು ಮೃತಪಟ್ಟ ನಂತರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಪೋಷಕರ ಸಂಖ್ಯೆ ಅತಿವಿರಳ. ಅಂತಹುದ್ದರಲ್ಲಿ ಈ ಪೋಷಕರು ನಮ್ಮ ಮಗನ ಕಣ್ಣು ಸೇರಿದಂತೆ ಇತರ ಅಂಗಾಗಗಳು ಇನ್ನೊಬ್ಬರಿಗೆ ಉಪಯೋಗವಾಗಲಿ ಎಂದು ನೋವಿನಲ್ಲೂ ಔದಾರ್ಯ ಮೆರೆದಿದ್ದಾರೆ.
