ಪ್ರೇಯಸಿ ವಿಷ ಸೇವಿಸಿದ್ದಕ್ಕೆ ನೇಣಿಗೆ ಶರಣಾದ ಯುವಕ
- ಪ್ರೇಯಸಿ ವಿಷ ಸೇವಿಸಿದ್ದಕ್ಕೆ, ಮನನೊಂದು ಪ್ರೇಮಿ ಆತ್ಮಹತ್ಯೆ
- ಸಂಬಂಧಿಯೊಂದಿಗೆ ಹಸೆಮಣೆ ಏರಿದ್ದ ಪ್ರೇಯಸಿಯೊಂದಿಗೆ ಜಗಳ
ದಾವಣಗೆರೆ: ಪ್ರೇಯಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯಿಂದ ಮನನೊಂದ ಪ್ರೇಮಿಯೊಬ್ಬ, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹಿರೇಕೆರೂರು ತಾಲೂಕು ಕಮಲಾಪುರದ ಮಹೇಶ್ (24) ಎಂಬವವರು ನೇಣಿಗೆ ಶರಣಾದವರು. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಮೊದಲ ಮಹಡಿಯ ಮೆಟ್ಟಿಲಿನ ಕಂಬಿಗೆ ನೇಣುಬಿಗಿದುಕೊಂಡು ಈ ಕೃತ್ಯವೆಸಗಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಹೇಶ್ ಪ್ರೀತಿಸುತ್ತಿದ್ದ ಯುವತಿ ರಾಣೆಬೆನ್ನೂರಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅನಾರೋಗ್ಯಗೊಂಡ ಅವರನ್ನು ದಾವಣಗೆರೆಯ ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಂಜಿತಾ ಮತ್ತು ಮಹೇಶ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕೆಲವು ತಿಂಗಳ ಹಿಂದೆ ರಂಜಿತಾಳನ್ನು ಸಂಬಂಧಿಯೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇವರಿಬ್ಬರ ಸಂಪರ್ಕ ಮುಂದುವರಿದಿತ್ತು. ಇತ್ತೀಚೆಗೆ ಇವರಿಬ್ಬರ ನಡುವೆ ನಡೆದ ಜಗಳದಿಂದ ಬೇಸತ್ತ ರಂಜಿತಾ, ವಿಷ ಸೇವಿಸಿದ್ದಳೆಂದು ಹೇಳಲಾಗುತ್ತಿದೆ.