ಕಾಂಗ್ರೆಸ್ಸಿಗೆ ಲಿಂಗಾಯತರ ಬೆಂಬಲ ಸಾಧ್ಯತೆ: ಮಾತೆ
ರಾಜ್ಯದಲ್ಲಿ ವೀರಶೈವರಿಗಿಂತ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಳೇ ಮೈಸೂರು ಭಾಗದ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಲಿಂಗಾಯತರೇ ಹೆಚ್ಚಿದ್ದಾರೆ. ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವ ಸಾಧ್ಯತೆ ಇದೆ ಎಂದು ಮಾತೆ ಮಹಾದೇವಿ ಹೇಳಿದರು.
ಬೆಂಗಳೂರು : ರಾಜ್ಯದಲ್ಲಿ ವೀರಶೈವರಿಗಿಂತ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಳೇ ಮೈಸೂರು ಭಾಗದ ಎರಡು ಜಿಲ್ಲೆಗಳನ್ನು ಹೊರತುಪಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಲಿಂಗಾಯತರೇ ಹೆಚ್ಚಿದ್ದಾರೆ. ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುವ ಸಾಧ್ಯತೆ ಇದೆ ಎಂದು ಮಾತೆ ಮಹಾದೇವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಲಿಂಗಾಯತ ಧರ್ಮ ಘೋಷಣೆ ನಿರ್ಣಯದಿಂದ ಕೋಪಗೊಂಡಿರುವ ವೀರಶೈವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದ್ದಾರೆ, ಇದು ನಿಜಕ್ಕೂ ಹಾಸ್ಯಾಸ್ಪದ. ಮತದಾನ ವೈಯಕ್ತಿಕ ವಿಚಾರ ಇಂತಹ ಸಣ್ಣ ಹೇಳಿಕೆ ನೀಡಬಾರದು’ ಎಂದರು.
ಸಿದ್ದಗಂಗಾ ಶ್ರೀಗಳ ಅಭಿಪ್ರಾಯ ಹಾಗೂ ಮಹಾಸಭಾದ ತೀರ್ಮಾನಕ್ಕೆ ನಾವು ಬದ್ಧ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಸಿದ್ಧಗಂಗಾ ಕಿರಿಯ ಶ್ರೀಗಳು ಸರ್ಕಾರದ ನಿರ್ಧಾರ ಸ್ವಾಗತಿಸಿದ್ದಾರೆ. ಆದರೆ, ಬಿಎಸ್ವೈ ರಾಜಕೀಯಕ್ಕೆ ಎಳೆದು ತಂದಿದ್ದಾರೆ. ಪಂಚಾಚಾರ್ಯರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಸುವುದಿಲ್ಲ. ಆದರೆ, ವಚನ ಸಾಹಿತ್ಯ ನಮ್ಮ ಧರ್ಮ ಗ್ರಂಥ ಎಂದು ಹೇಳುತ್ತಾರೆ. ಇದು ಯಾವ ನ್ಯಾಯ? ಇನ್ನು ಪೇಜಾವರ ಶ್ರೀಗಳು ಲಿಂಗಾಯತರು ಹಿಂದೂಗಳು, ಶಿವನ ಆರಾಧಕರು ಎಂದಿದ್ದಾರೆ. ಲಿಂಗಾಯತರು ಶಿವನ ಆರಾಧಕರಲ್ಲ, ಇಷ್ಟಲಿಂಗ ಪೂಜೆಸುತ್ತಾರೆ. ನಮ್ಮಲ್ಲಿ ಜಾತಿ ಪದ್ಧತಿ ಇಲ್ಲ. ಹಾಗಾಗಿ ಲಿಂಗಾಯತ ಸ್ವತಂತ್ರ್ಯಧರ್ಮ. ಇದನ್ನು ಶ್ರೀಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಅವರು ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರು ಒಪ್ಪುತ್ತಾರೆ ಎನ್ನುವ ನಂಬಿಕೆ ಇದೆ. ಶೀಘ್ರದಲ್ಲೇ ನಾವುಗಳು ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದರು.
ಆರ್ಎಸ್ಎಸ್ ಒಡೆದು ಆಳುವ ನೀತಿ: ಆರ್ಎಸ್ಎಸ್ ಬಸನವನ ಬಾಗೇವಾಡಿಯಲ್ಲಿ ಜಂಗಮರ ಸಮ್ಮೇಳನಕ್ಕೆ ಕರೆ ನೀಡಿದೆ. ಲಿಂಗಾಯತ ಸಮಾಜದಿಂದ ಜಂಗಮರನ್ನು ಬೇರೆ ಮಾಡುವ ಈ ತಂತ್ರವನ್ನು ಖಂಡಿಸುತ್ತೇವೆ. ಏಕೆಂದರೆ, ಜಂಗಮರೂ ಲಿಂಗಾಯತದ ಒಂದು ಉಪ ಪಂಗಡ. ಒಂದು ವೇಳೆ ಜಂಗಮರು ಆರ್ಎಸ್ಎಸ್ ಪಡೆದು ಆಳುವ ನೀತಿಗೆ ಬಲಿಯಾದರೆ ನೀರಿನಿಂದ ಹೊರತೆಗೆದ ಮೀನಿನಂತಾಗುತ್ತಾರೆ. ಆರ್ಎಸ್ಎಸ್ ಇಂತಹ ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.