ರೈತರ ಸಾಲ ಮನ್ನಾ ಮಾಡಿದ ಸರಕಾರ ರೈತ ವಿರೋಧಿ ಹೇಗಾಗುತ್ತೆ?: ಪರಮೇಶ್ವರ್
ರೈತರ ಸಾಲ ಮನ್ನಾ ಮಾಡಿ, ಅನೇಕ ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ ಕಾಂಗ್ರೆಸ್ ಸರಕಾರ ಅದು ಹೇಗೆ ರೈತ ವಿರೋಧಿಯಾಗುತ್ತದೆ?
ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪ್ರಧಾನಿ ಮೋದಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್, 'ರಾಜ್ಯದಲ್ಲಿ ಮಹದಾಯಿ ವಿವಾದ ಭುಗಿಲೆದ್ದಿದೆ. ಜನರು ನೀರಿಲ್ಲದೇ ಸಾಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡದ ಮೋದಿಯಿಂದ ಇನ್ನೇನು ಜನ ಸ್ನೇಹಿ ಕಾರ್ಯಕ್ರಮಗಳನ್ನು ನಿರೀಕ್ಷಿಸಬಹುದು,' ಎಂದು ಪ್ರಶ್ನಿಸಿದ್ದಾರೆ.
''ಜನರ ಒತ್ತಾಯದ ಮೇರೆಗೆ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಬಿಟ್ಟಿದ್ದೇವೆ, ಸಬರ್ಬನ್ ಟ್ರೈನ್ ಯೋಜನೆ ಕೊಟ್ಟಿದ್ದೇವೆ ಅಂತ ಮೋದಿ ಹೇಳಿದ್ದಾರೆ,' 17 ಸಾವಿರ ಕೋಟಿ ರೂ. ಯೋಜನೆ ಪೂರ್ತಿ ಕೇಂದ್ರ ಸರ್ಕಾರವೇ ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ, ಇದರಲ್ಲಿ ಕೇಂದ್ರದ ಷೇರು ಕೇವಲ ಶೇ.20ರಷ್ಟು ಮಾತ್ರ,' ಎಂದ ಪರಮೇಶ್ವರ್, 'ರಾಜಕೀಯ ಉದ್ದೇಶಗಳಿಗೆ ಪ್ರಧಾನಿಯೇ ರಾಜ್ಯದ ಜನತೆಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ,' ಎಂದು ಆರೋಪಿಸಿದ್ದಾರೆ.
'ರಾಜ್ಯ ಸರ್ಕಾರ ರೈತ ವಿರೋಧಿ ಎಂದಿದ್ದಾರೆ. ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ಎಂದಿದ್ದಾರೆ. ರೈತರ ಸಾಲಮನ್ನಾ ಮಾಡಿದ ಸರ್ಕಾರವನ್ನ ರೈತ ವಿರೋಧಿ ಸರ್ಕಾರ ಎಂದಿದ್ದಾರೆ. ರೈತ ಸತ್ತಾಗ ಪರಿಹಾರ ಕೊಡಿ ಅಂದರೆ ಕೇಂದ್ರ ಸರ್ಕಾರ ಕೊಡಲಿಲ್ಲ, ಇವರು ರೈತರ ಪರ ಇದ್ದಾರಂತೆ?' ಎಂದು ಪರಮೇಶ್ವರ್ ಲೇವಡಿ ಮಾಡಿದರು.
'ಐಟಿಸಿಟಿ, ಸಿಲಿಕಾನ್ ಸಿಟಿ ಎಂಬ ಬಿರುದು ನಾವು ತೆಗೆದುಕೊಂಡರೆ ಪ್ರಧಾನಿ ಕರ್ನಾಟಕವನ್ನು ಅಪರಾಧಿಗಳ ರಾಜ್ಯ ಎಂದಿದ್ದಾರೆ. ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಕ್ರೈಮ್ ರೇಟ್ ಜಾಸ್ತಿ ಇದೆ. ಕರ್ನಾಟಕ ಅಪರಾಧಗಳಲ್ಲಿ ಟಾಪ್ ಟೆನ್ನಲ್ಲಿ ಬಂದೇ ಇಲ್ಲ. ರೇಪ್ ಕೇಸ್ ಗಳಲ್ಲಿ ಇಡೀ ದೇಶದಲ್ಲಿ ಮೊದಲ ಸ್ಥಾನದಲ್ಲಿ ಇರೋದು ಮಧ್ಯಪ್ರದೇಶ, ಅಲ್ಲಿ ಬಿಜೆಪಿ ಸರ್ಕಾರ ಇದೆ. ಯಡಿಯೂರಪ್ಪ ಭಾಷಣದ ವೇಳೆ ಬಿಜೆಪಿಯ 23 ಕಾರ್ಯಕರ್ತರ ಕೊಲೆ ಆಗಿದೆ ಅಂತ ಹೇಳಿದ್ದಾರೆ. ಆದರೆ ಗೃಹ ಇಲಾಖೆಯ ಸ್ಪಷ್ಟ ಪಡಿಸಿದೆ ಈ ಪ್ರಕಾರ 9 ಕೊಲೆ ಮಾತ್ರ ಕಮ್ಯುನಲ್ ಕಾರಣಕ್ಕೆ ಆಗಿದೆ,' ಎಂದು ಕಾಂಗ್ರೆಸ್ ವಿರುದ್ಧದ ಮೋದಿ ದಾಳಿಗೆ ತಿರುಗೇಟು ನೀಡಿದರು.