ಇಂದು ನಿರ್ಧಾರವಾಗಲಿದೆ ಜೆಡಿಎಸ್ ಬಂಡಾಯ ಶಾಸಕರ ಭವಿಷ್ಯ
ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಬೆಂಗಳೂರು : ಜೆಡಿಎಸ್ ನ ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕಳೆದ ರಾಜ್ಯಸಭಾ ಚುನಾವಣಾ ವೇಳೆ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಜಮೀರ್, ಚೆಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ,ಭಿಮಾ ನಾಯಕ್, ಅಖಂಡ ಶ್ರೀನಿವಾಸ ಮೂರ್ತಿ, ಹಾಗೂ ಇಕ್ಬಾಲ್ ಅನ್ಸಾರಿ ವಿರುದ್ದ ಜೆಡಿಎಸ್ ಸ್ಪೀಕರ್ ಗೆ ದೂರು ನೀಡಿದ್ದರು.
ಈ ಏಳೂ ಜನ ಶಾಸಕರ ಸದಸ್ಯತ್ವ ರದ್ದು ಪಡಿಸಿ ಅಂತಾ ಸ್ಪೀಕರ್ ಗೆ ಮನವಿ ಮಾಡಿದ್ದರು. ವರ್ಷ ಕಳೆಯುತ್ತಾ ಬಂದಿದ್ದರೂ ವಿಚಾರಣೆ ಇನ್ನೂ ಪೂರ್ಣ ಆಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಜೆಡಿಎಸ್ ನ ಬಿ ಬಿ ನಿಂಗಯ್ಯ, ಮತ್ತು ಸಿ ಎನ್ ಬಾಲಕೃಷ್ಣ ಸ್ಪೀಕರ್ ಗೆ ಮತ್ತೆ ಮನವಿ ಮಾಡಿ ಆದಷ್ಟು ಶೀಘ್ರವಾಗಿ ವಿಚಾರಣೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದರು.
ಈಗಾಗಲೇ ಬಂಡಾಯ ಶಾಸಕರಿಗೆ ನೋಟೀಸ್ ನೀಡಲಾಗಿದ್ದು ಇಂದು ಸ್ಪೀಕರ್ ಕೊಠಡಿಯಲ್ಲಿ ನಡೆಯುವ ವಿಚಾರಣೆಗೆ ಅವರು ಹಾಜರಾಗಬೇಕಿದೆ.ಒಂದು ವೇಳೆ ಈ ಏಳೂ ಜನರ ಸದಸ್ಯತ್ವ ರದ್ದಾದರೆ ಈ ರಾಜ್ಯಸಭೆ ಚುನಾವಣೆ ಗೆ ಮತ ಹಾಕುವ ಹಕ್ಕನ್ನು ಕಳೆದು ಕೊಳ್ಳಲಿದ್ದಾರೆ. ಹಾಗೇನಾದರೂ ಆದರೆ ಅದು ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗುವುದು ಖಂಡಿತಾ. ಈಗಾ ಎಲ್ಲರ ಚಿತ್ತ ಸ್ಪೀಕರ್ ಇಂದು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಮೇಲೆ ನೆಟ್ಟಿದೆ.