ದೇವೇಗೌಡರು ಅಧಿಕಾರ ಕಳೆದುಕೊಂಡಿದ್ದೇಕೆ? ಪೂಜಾರಿ ಆತ್ಮಕಥೆಯಲ್ಲಿ ಉಲ್ಲೇಖ
ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅವರ ಆತ್ಮಕಥೆ ಇಲ್ಲಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾಗಿದ್ದು, ಖುದ್ದು ಪೂಜಾರಿಯವರೇ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಮಂಗಳೂರು: ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಅವರ ಆತ್ಮಕಥೆ ಇಲ್ಲಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾಗಿದ್ದು, ಖುದ್ದು ಪೂಜಾರಿಯವರೇ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಪೂಜಾರಿ ಪುತ್ರರಾದ ಸಂತೋಷ್ ಮತ್ತು ಪ್ರಕಾಶ್ ಪ್ರಕಾಶಕರಾಗಿರುವ 'ಸಾಲ ಮೇಳ ಸಂಗ್ರಾಮ' ಆತ್ಮಕಥೆಯನ್ನು ಪತ್ರಕರ್ತ ಲಕ್ಷ್ಣ ಕೊಡಸೆ ಅಕ್ಷರ ರೂಪಕ್ಕಿಳಿಸಿದ್ದಾರೆ. 210 ಪುಟಗಳ ಒಂಬತ್ತು ಅಧ್ಯಯನಗಳ ಈ ಪುಸ್ತಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ಜೆ.ಆರ್.ಲೋಬೋ, ಶಾಸಕಿ ಶಕುಂತಳಾ ಶೆಟ್ಟಿ, ಪರಿಷತ್ ಸಚೇತಕ ಐವನ್ ಡಿಸೋಜಾ ಸೇರಿ ಹಲವು ಗಣ್ಯರ ಉಪಸ್ಥಿತಿಯಲ್ಲಿ ತಮ್ಮ ಆತ್ಮಕಥೆಯನ್ನು ಪೂಜಾರಿಯವರು ಬಿಡುಗಡೆ ಮಾಡಿದ್ದಾರೆ.
ದೇವೇಗೌಡರು ಅಧಿಕಾರ ಕಳೆದುಕೊಂಡಿದ್ದೇಕೆ?
'ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುದ್ರೋಳಿ ದೇವಸ್ಥಾನಕ್ಕೆ ಬರುವುದಾಗಿ ಹೇಳಿ, ವಚನಭಂಗ ಮಾಡಿದ್ದರಿಂದ ಅಧಿಕಾರ ಕಳಕೊಂಡರು,' ಎಂಬುದನ್ನು ಪೂಜಾರಿ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
'ಪ್ರಧಾನಿಯಾಗೋ ಅವಕಾಶ ಕೂಡಿ ಬಂದಾಗ ನನ್ನ ಸಹಕಾರ ಕೇಳಿದ್ದರು. ನನ್ನನ್ನು ಪ್ರಧಾನಿಯನ್ನಾಗಿಸಲು ನಿಮ್ಮಿಂದ ಮಾತ್ರ ಸಾಧ್ಯ, ಎಂದಿದ್ದರು. ಸಹಾಯ ಮಾಡ್ತೀನಿ. ಆದರೆ, ಪ್ರಧಾನಿಯಾದ ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ಬರ್ಬೇಕು ಎಂದು ಕಂಡೀಷನ್ ಹಾಕಿದ್ದೆ. ದೇವೇಗೌಡರು ಅದಕ್ಕೆ ಸಂತೋಷದಿಂದ ಒಪ್ಪಿದ್ದರು. ಆದರೆ ಪ್ರಧಾನಿಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದರೂ, ಕುದ್ರೋಳಿ ದೇವಸ್ಥಾನಕ್ಕೆ ಬಂದಿರಲಿಲ್ಲ. ಇದರಿಂದ ಕೋಪಗೊಂಡು ನಾನು ಪೂಜಾರಿಗೆ ಹುಟ್ಟಿದವನಾದರೆ ಒಂದು ತಿಂಗಳಲ್ಲಿ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗಿಸ್ತೇನೆ ಎಂದಿದ್ದೆ, ಈ ವಿಚಾರ ಗೌಡರಿಗೆ ಗೊತ್ತಾಗಿ ಕಂಗಾಲಾಗಿದ್ದರು. ಮುಂದಿನ ಒಂದೇ ತಿಂಗಳಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡರು,' ಎಂದು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಲಾಗಿದೆ.