ಮತ್ತೆ ಜೀವ ಪಡೆಯುತ್ತಾ ಸಿಎಂ ಹ್ಯೂಬ್ಲೋ ವಾಚ್ ಪ್ರಕರಣ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯೂಬ್ಲೋ ವಾಚ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣವನ್ನು ತನಿಖೆಯೇ ಮಾಡದೇ ಮುಚ್ಚಲಾಗಿದೆ ಎಂದು ಎಸಿಬಿಯಲ್ಲಿ ದೂರು ದಾಖಲಿಸಿದ್ದ ನಟರಾಜ್ ಶರ್ಮಾ ಆರೋಪಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯೂಬ್ಲೋ ವಾಚ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣವನ್ನು ತನಿಖೆಯೇ ಮಾಡದೇ ಮುಚ್ಚಲಾಗಿದೆ ಎಂದು ಎಸಿಬಿಯಲ್ಲಿ ದೂರು ದಾಖಲಿಸಿದ್ದ ನಟರಾಜ್ ಶರ್ಮಾ ಆರೋಪಿಸಿದ್ದಾರೆ.
'ಕಳ್ಳತನವಾಗಿ, ಪೊಲೀಸರು ವಶಪಡಿಸಿಕೊಂಡಿದ್ದ ವಾಚನ್ನು ಸಿಎಂಗೆ ನೀಡಲಾಗಿತ್ತೆಂದು ಮೊದಲು ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಸಿಎಂ ವಿರುದ್ಧ ಹತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಆದರೆ, ಯಾವುದೇ ಪ್ರಕರಣದ ತನಿಖೆಯನ್ನೂ ನಡೆಸಿಲ್ಲ,' ಎಂದು ನಟರಾಜ್ ಶರ್ಮಾ ಆರೋಪಿಸಿದ್ದಾರೆ.
'ಎಸಿಬಿ ಸಂಪೂರ್ಣವಾಗಿ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹ್ಯೂಬ್ಲೋ ವಾಚ್ ವಿಷಯದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲವೆಂದು ಎಸಿಬಿ ಅಧಿಕಾರಿಗಳು ಹೇಳುತ್ತಿದ್ದಾರೆ. ದೂರುದಾರನ ಹೇಳಿಕೆ ಪಡೆಯದೇ ತನಿಖೆಯನ್ನು ಮುಚ್ಚಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ,' ಎಂದು ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ನಟರಾಜ್ ಆರೋಪಿಸಿದ್ದಾರೆ.
'ಡಾ.ಗಿರೀಶ್ ಚಂದ್ರ ವರ್ಮಾ ಎಂಬುವವರು ಸಿಎಂಗೆ ಈ ವಾಚ್ ಗಿಫ್ಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಡಾ.ವರ್ಮಾ ಅವರು ಪ್ರಮಾಣಪತ್ರ ಸಲ್ಲಿದ್ದಾರೆ, ಎಂದು ಎಸಿಬಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಪ್ರಮಾಣ ಪತ್ರ ನಕಲಿ. ಅದರಲ್ಲಿ
ವರ್ಮಾ ಅವರ ಸಹಿಯನ್ನು ನಕಲಿ ಮಾಡಲಾಗಿದೆ. ಗಿರೀಶ್ ಚಂದ್ರ ವರ್ಮಾ ಹುಟ್ಟಿರೋದು ತಿರುವನಂತಪುರಂ. ದಾವಾಣಗೆರೆಯಲ್ಲಿ ಎಂಬಿಬಿಎಸ್ ಮಾಡಿದ್ದು, ಅಮೆರಿಕದಲ್ಲಿ ಫೆಲೋಶಿಪ್ ಪಡೆದಿದ್ದಾರೆ. ನಂತರ ಅವರು ಡಾಕ್ಟರ್ ಆಗಿ ಮುಂಬೈನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಲ್ಲಿಯವರೆಗೂ ಕರ್ನಾಟಕದ ಸಂಪರ್ಕ ಡಾ. ವರ್ಮಾಗೆ ಇರಲಿಲ್ಲ. ಈ ವಾಚನ್ನು ಸಿಎಂಗೆ ಡಾ. ವರ್ಮಾ ನೀಡಿದ್ದಾರೆನ್ನುವುದೇ ಸುಳ್ಳು. ಒಂದು ವೇಳೆ ದಾಖಲೆ ಪಡೆದುಕೊಂಡಿದ್ದರೆ, ದಯಮಾಡಿ ನೀಡಿ! ಡಾ.ವರ್ಮಾ ಈ ವಾಚನ್ನು ಯಾವಾಗ ಖರೀದಿಸಿದ್ದಾರೆಂಬುದನ್ನೂ ತಿಳಿಸಿಲ್ಲ. ತನಿಖೆ ಮಾಡಿದ್ದಾರೆ ಎಂದು ಹೇಳುತ್ತಿರುವ ತನಿಖೆಯ ದಾಖಲೆ ನೀಡಿ,' ಎಂದು ಎಡಿಜಿಪಿಗೆ ಶರ್ಮಾ ಆಗ್ರಹಿಸಿದ್ದಾರೆ.