ಸರ್ಕಾರಿ ಶಾಲೆಗೆ ಜೀವ ತುಂಬಿದ ಅನಿವಾಸಿ ಭಾರತೀಯರು: ಹೈಟೆಕ್ ಶಾಲೆ ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರ
ದೇಶ ಸೇವೆ ಅಂತಾ ಮಾಡೋದಾದ್ರೆ, ದೇಶದ ಒಳಗಿದ್ದರೇನು? ಹೊರಗಿದ್ದರೇನು? ಸೇವೆ ಮಾಡುವ ಮನಸ್ಸಿರಬೇಕಷ್ಟೆ. ಈ ಮಾತಿಗೆ ಪೂರಕವೆಂಬಂತೆ, ಇಲ್ಲೊಂದಿಷ್ಟು ಜನ ಅನಿವಾಸಿ ಭಾರತೀಯರು ಸೇರಿ ನಮ್ಮ ನಾಡಿನ ಋಣ ತೀರಿಸೋಕೆ ಮುಂದಾಗಿದ್ದಾರೆ. ಹಾಗೇ ಅದಕ್ಕೆ ಪಣ ತೊಟ್ಟವರಂತೆ ಕೆಲಸ ಮಾಡುತ್ತಿದ್ದಾರೆ. ಯಾರಪ್ಪಾ ಅವರು? ಏನದು ಕೆಲಸ ಅಂತೀರಾ? ಇಲ್ಲಿದೆ ವಿವರ
ಚಿತ್ರದುರ್ಗ(ಜೂ.13): ದೇಶ ಸೇವೆ ಅಂತಾ ಮಾಡೋದಾದ್ರೆ, ದೇಶದ ಒಳಗಿದ್ದರೇನು? ಹೊರಗಿದ್ದರೇನು? ಸೇವೆ ಮಾಡುವ ಮನಸ್ಸಿರಬೇಕಷ್ಟೆ. ಈ ಮಾತಿಗೆ ಪೂರಕವೆಂಬಂತೆ, ಇಲ್ಲೊಂದಿಷ್ಟು ಜನ ಅನಿವಾಸಿ ಭಾರತೀಯರು ಸೇರಿ ನಮ್ಮ ನಾಡಿನ ಋಣ ತೀರಿಸೋಕೆ ಮುಂದಾಗಿದ್ದಾರೆ. ಹಾಗೇ ಅದಕ್ಕೆ ಪಣ ತೊಟ್ಟವರಂತೆ ಕೆಲಸ ಮಾಡುತ್ತಿದ್ದಾರೆ. ಯಾರಪ್ಪಾ ಅವರು? ಏನದು ಕೆಲಸ ಅಂತೀರಾ? ಇಲ್ಲಿದೆ ವಿವರ
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಮೃತಪುರ ಗ್ರಾಮ, ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ಈ ಗ್ರಾಮದಲ್ಲಿ ಬಹುತೇಕವಾಗಿ ಅಲೆಮಾರಿ ಜನಾಂಗದವರೇ ಹೆಚ್ಚಾಗಿ ವಾಸಮಾಡುತ್ತಿದ್ದಾರೆ. ಕಳೆದ ವರ್ಷ ಮರ ಉರುಳಿ ಬಿದ್ದ ಪರಿಣಾಮ ಈ ಗ್ರಾಮದಲ್ಲಿದ್ದ ಸರ್ಕಾರಿ ಶಾಲೆ ಕಟ್ಟಡ ಸಂಪೂರ್ಣ ನೆಲಸಮವಾಗಿತ್ತು. ಗ್ರಾಮಸ್ಥರೆಲ್ಲ ಸಚಿವರ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ನು ಗಮನಿಸಿದ, ಅನಿವಾಸಿ ಭಾರತೀಯರೇ ಹುಟ್ಟುಹಾಕಿರುವ ಒಸಾಟ್ ಅನ್ನೋ ಸಂಸ್ಥೆ ಈ ಗ್ರಾಮದಲ್ಲಿ ಸುಸಜ್ಜಿತವಾದ ಹೈಟೆಕ್ ಶಾಲೆ ನಿರ್ಮಿಸಿ, ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.
ಇನ್ನು ಅತ್ಯಂತ ಹಿಂದುಳಿದ ಗ್ರಾಮದಲ್ಲಿ ಇಂತಹ ಸುಸಜ್ಜಿತವಾದ ಹೈಟೆಕ್ ಸೌಲಭ್ಯ ಇರುವ ಶಾಲೆ ನಿರ್ಮಾಣ ಮಾಡಿರುವ ಒಸಾಟ್ ಸಂಸ್ಥೆಯ ಸೇವೆಯನ್ನ ಮನಸಾರೆ ಶ್ಲಾಘಿಸಿರುವ ಅಮೃತಪುರ ಗ್ರಾಮಸ್ಥರು, ಒಸಾಟ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೇವಲ ದಾಖಲೆಗಳ ಮೇಲೆ ಮಾತ್ರ ಕೋಟ್ಯಾಂತರ ರೂಪಾಯಿ ಖರ್ಚು ತೋರಿಸಿ, ಸಾರ್ವಜನಿಕರ ಹಣವನ್ನು ಲೂಟಿಮಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ವಿದೇಶಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ತಮ್ಮಸ್ವಂತ ಖರ್ಚಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೈಟೆಕ್ ಶಾಲೆಗಳನ್ನ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವೇ ಸರಿ.