ಮಾರಾಣಾಂತಿಕ ರೋಗದಿಂದ ಬಳಲುತ್ತಿದ್ದ ಬಾಲಕನೊಬ್ಬನ ಎಸ್ಐ ಆಗುವ ಆಸೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಈಡಿರಿಸಿದ್ದ ಇನ್ಸ್‌ಪೆಕ್ಟರ್ ರಾಜು ಅಪಘಾತದಲ್ಲಿ ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು: ತಲಸ್ಸೇಮಿಯಾ ಹಾಗೂ ಮಧಮೇಹದಿಂದ ಬಳಲುತ್ತಿದ್ದ 12 ವರ್ಷದ ಬಾಲಕನಿಗೆ ಸಬ್‌ಇನ್ಸ್‌ಪೆಕ್ಟರ್ ಆಗೋ ಬಯಕೆ ಇತ್ತು. ವಿವಿ ಪುರ ಪೊಲೀಸ್ ಸ್ಟೇಷನ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಟಿ.ಡಿ.ರಾಜು ಬಾಲಕನ ಆಶಯವನ್ನು ಈಡೇರಿಸಿ, ಗೌರವಿಸಿದ್ದರು. ಇಂಥ ಮಾನವೀಯತೆ ಮೆರೆದ ರಾಜು ಅವರೇ ಅಪಘಾತಕ್ಕೀಡಾಗಿ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

Add Asianetnews Kannada as a Preferred SourcegooglePreferred

ಕುಮಾರಸ್ವಾಮಿ ಲೇಔಟ್ ಬಳಿ ಕಳೆದ ವಾರ ಸಂಭವಿಸಿದ ಅಪಘಾತದಲ್ಲಿ ರಾಜು ಅವರು ಅತೀವ ಗಾಯಗೊಂಡಿದ್ದರು. ಜಿಮ್ ಮುಗಿಸಿ ಮನೆಗೆ ಮರಳುತ್ತಿದ್ದ ರಾಜು ಅವರಿಗೆ ನಾರಾಯಣ ಶಾಲಾ ವಾಹನ ಡಿಕ್ಕಿ ಹೊಡೆದಿತ್ತು. ತಕ್ಷಣವೇ ಗಾಯಗೊಂಡ ರಾಜು ಅವರನ್ನು ಶಾಲಾ ವಾಹನದ ಚಾಲಕನೇ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಶರಣಾಗಿದ್ದನು. 
ದ್ವಿ ಚಕ್ರವಾಹನದಲ್ಲಿ ತೆರಳುತ್ತಿದ್ದಅವರು ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ, ಶ್ವಾಸಕೋಶ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಮಾನವೀಯ ಮೌಲ್ಯವಿದ್ದ ಪೊಲೀಸ್...
ಕಳೆದ ತಿಂಗಳಷ್ಟೇ ವಿಶೇಷ ಕಾರ್ಯಪಡೆಯ (STF) ಇನ್ಸ್‌ಪೆಕ್ಟರ್ ಆಗಿ ರಾಜು ಅವರು ವರ್ಗವಾಗಿದ್ದರು. ಈ ಮೊದಲು ಅವರು ವಿವಿ ಪುರದಲ್ಲಿ SI ಆಗಿದ್ದಾಗ ಶಶಾಂಕ್ ಎಂಬ ತಲಸ್ಸೇಮಿಯಾ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಶಶಾಂಕ್ ಎಂಬ 12 ವರ್ಷದ ಬಾಲಕನ ಆಸೆ ಪೂರೈಸಲು ಒಂದು ದಿನದ ಇನ್ಸ್‌ಪೆಕ್ಟರ್ ಮಾಡಿದ್ದರು. ಆವನಿಗೆ ತಮ್ಮ ಕುರ್ಚಿ ಮೇಲೆ ಕೂರಿಸಿ, ಸಕಲ ಗೌರವ ಸೂಚಿಸಿದ್ದರು. ಅಲ್ಲದೇ ಪೊಲೀಸರು ಈ ಬಾಲಕನಿಗೆ ಗೌರವ ವಂದನೆ ನೀಡಿದ್ದು, ಮಾರಾಣಾಂತಿಕ ರೋಗದಿಂದ ಬಳಲುತ್ತಿದ್ದವನ ಮೊಗದಲ್ಲಿ ನಗು ಮೂಡಿತ್ತು. ಇಂಥ ಮಾನವೀಯ ಮೌಲ್ಯಗಳನ್ನು ಎತ್ತ ಹಿಡಿದ ಇನ್ಸ್‌ಪೆಕ್ಟರ್ ನಿಧನಕ್ಕೆ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.