ಈರುಳ್ಳಿ ಬೆಲೆ ಕುಸಿತ ರೈತರ ಆಕ್ರೋಶ
ಈರುಳ್ಳಿ ಬೆಲೆ ದಿಡೀರ್ ಕುಸಿತ ಕಂಡ ಪರಿಣಾಮ ರೊಚ್ಚಿಗೆದ್ದ ರೈತರು ರಸ್ತೆ ತಡೆ ಮಾಡಿ ಆಕ್ರೋಶ ಹೊರ ಹಾಕಿದ ಘಟನೆಗೆ ಗುರುವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಾಕ್ಷಿಯಾಯಿತು.
ದಾವಣಗೆರೆ (ನ.10): ಈರುಳ್ಳಿ ಬೆಲೆ ದಿಡೀರ್ ಕುಸಿತ ಕಂಡ ಪರಿಣಾಮ ರೊಚ್ಚಿಗೆದ್ದ ರೈತರು ರಸ್ತೆ ತಡೆ ಮಾಡಿ ಆಕ್ರೋಶ ಹೊರ ಹಾಕಿದ ಘಟನೆಗೆ ಗುರುವಾರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಾಕ್ಷಿಯಾಯಿತು.
ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಲು ಮುಂದಾದ ತರುವಾಯ ಎಪಿಎಂಸಿಯಲ್ಲಿ ದರ ಹೆಚ್ಚಳವಾಗಿತ್ತು. ಬುಧವಾರ ಕ್ವಿಂಟಾಲ್ ಗೆ ಸಾವಿರ ರುಪಾಯಿಯಂತೆ ಕಿಮ್ಮತ್ತು ಕಟ್ಟಿ ಖರೀದಿದಾರರು ಖರೀದಿ ಮಾಡಿದ್ದರು. ಈರುಳ್ಳಿಗೆ ಬೆಲೆ ಸಿಕ್ಕ ಪರಿಣಾಮ ಖುಷಿಯಿಂದಲೇ ಗುರುವಾರದ ಮಾರುಕಟ್ಟೆಗೆ ಉತ್ಪನ್ನ ತಂದ ರೈತರಿಗೆ ಆಘತಕಾರಿ ಸಂಗತಿ ಕಾದು ಕುಳಿತಿತ್ತು. ಕೇವಲ 400 ರುಪಾಯಿಯಿಂದ ಐದು ನೂರರವರೆಗೆ ವರ್ತಕರು ಖರೀದಿ ಮಾಡಲು ಮುಂದಾದಾಗ ರೈತರ ಆಕ್ರೋಶ ಇಮ್ಮಡಿಯಾಯಿತು.
ರೊಚ್ಚಿಗೆದ್ದು ಈರುಳ್ಳಿಯನ್ನು ರಸ್ತೆಗೆ ಸುರಿದು ನೋವು ಹೊರ ಹಾಕಿದರು. ಪಿಬಿ ರಸ್ತೆ ಇಳಿದು ಕೆಲ ಕಾಲ ರಸ್ತೆ ತಡೆ ಮಾಡಿದರು ಇದರಿಂದಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬರಗಾಲದಿಂದ ರೈತರು ಕೆಂಗಟ್ಟಿದ್ದಾರೆ. ಜೀವನ ಮಾಡುವುದು ಕಷ್ಟಕರವಾಗಿದೆ. ಈರುಳ್ಳಿ ಬೆಳೆಗೆ ಹಾಕಿದ ಬಂಡವಾಳವು ಸಹ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ರೈತರು ವಿಷ ಕುಡಿಯುವಂತಹ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನಾ ನಿರತ ರೈತರು ನೋವು ತೋಡಿಕೊಂಡರು.
ರೈತರು ಪ್ರತಿಭಟನೆ ಮಾಡುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಅಧಿಕಾರಿಗಳು ದಲಾಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಬಾರದು. ಮುಕ್ತ ಮಾರುಕಟ್ಟೆಯಲ್ಲಿ ದರ ಕುಸಿದರೆ ಖರೀದಿ ಮಾಡುವ ಸಂಬಂಧ ಕೇಂದ್ರ ತೆರೆಯಲಾಗಿದೆ. ಇದರ ಅವಕಾಶ ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಈರುಳ್ಳಿ ಆವಕ ಹೆಚ್ಚಾಗಿರುವುದರಿಂದ ದರ ಕುಸಿದಿದೆ. ಈ ವಿಚಾರದಲ್ಲಿ ನಾವು ಅಸಹಾಯಕರೆಂದು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿದರು.
ಈರುಳ್ಳಿ ಬೆಳೆಗಾರ ಬಸವರಾಜ್ ಮಾತನಾಡಿ ಈರುಳ್ಳಿ ಕಿತ್ತು ಕೊಯ್ದು ಮಾರುಕಟ್ಟೆಗೆ ತರುವಷ್ಟರಲ್ಲಿ ಪಾಕೆಟ್ ಗೆ ೨೫೦ ರುಪಾಯಿ ಖರ್ಚು ಬರುತ್ತಿದೆ. ರಾಜ್ಯ ಸರ್ಕಾರ ಕ್ವಿಂಟಾಲ್ ಗೆ 640 ರೂಪಾಯಿ ಕಿಮ್ಮತ್ತು ಕಟ್ಟಿದರೆ ರೈತ ಉಳಿಯುವ ಬಗೆಯಾದರೂ ಹೇಗೆಂದು ಪ್ರಶ್ನಿಸಿದರು.