- ಮುಸ್ಲಿಮರ ಮತಗಳಿಂದ ಗೆದ್ದಿರುವುದಾಗಿ ಹೇಳಿದ ಸಚಿವ ರಮಾನಾಥ್ ರೈ- ಮುಸ್ಲಿಮರು ಮತ ಹಾಕಿದ್ದಾರೆಂದರೆ, ಹಿಂದುಗಳು ಮತ ಹಾಕಿಲ್ಲವೆಂದರ್ಥವೇ ಎಂದು ಪ್ರಶ್ನಿಸಿದ ಜಗ್ಗೇಶ್.- ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಸಂವಿಧಾನ ವಿರೋಧಿ ಹೇಳಿಕೆಗೂ ಜಗ್ಗೇಶ್ ವಿರೋಧ.

ಬೆಂಗಳೂರು: 'ಸಚಿವ ರಮಾನಾಥ್‌ ರೈ ಬಾಯಿಂದ ಜಾತ್ಯಾತೀತ ಅನ್ನೋ ಮಾತು ಬರಲಿಲ್ಲ, ಮುಸಲ್ಮಾನರ ಮತ,' ಅನ್ನೋ ಮಾತು ಬಂತು. ನಾನು ಬೇರೆ ಧರ್ಮದ ವಿರೋಧಿಯಲ್ಲ, ಮುಸಲ್ಮಾನರಿಂದಲೇ ಗೆದ್ದಿದ್ದೇವೆ ಅಂದಾಗ ಹಿಂದೂಗಳ ಹೃದಯಕ್ಕೆ ಚೂರಿ ಹಾಕಿದಂತಾಯ್ತು, ಸ್ವಾಭಿಮಾನಿ ಹಿಂದೂ ಆಗಿ ನಾನು ಈ ಮಾತು ಹೇಳುತ್ತಿದ್ದೇನೆ, ನಿಮ್ಮನ್ನು ಆರು ಬಾರಿ ಗೆಲ್ಲಲು ಹಿಂದೂಗಳು ಮತ ಹಾಕಲಿಲ್ಲವೇ? ಎಂದು ಮಾಜಿ ಶಾಸಕ, ನಟ ಜಗ್ಗೇಶ್ ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಮುಸಲ್ಮಾನರ ಮತಗಳಿಂದ ಶಾಸಕನಾಗಿ ಸಚಿವನಾಗಲು ಸಾಧ್ಯವಾಯ್ತು ಎಂಬ ಅರಣ್ಯ ಸಚಿವ ರಮಾನಾಥ್ ರೈ ಹೇಳಿಕೆ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಜಗ್ಗೇಶ್, ' ಚುನಾವಣೆ ಸಮಯದಲ್ಲಿ ಮುಸಲ್ಮಾನರಿಗೆ ಮೋಸ ಮಾಡ್ತಿದ್ದಾರೆ. ಹಿಂದು ಮತ್ತು ಮುಸಲ್ಮಾನರ ಮಧ್ಯೆ ತಂದಿಡುವ ಕೆಟ್ಟ ತಂತ್ರವನ್ನು ಅನುಸರಿಸುತ್ತಿದ್ದಾರೆ. ನಾವು ಹಿಂದುಗಳೇನು ಮುಠ್ಠಾಳರಾ? ನಿಮ್ಮನ್ನು ಗೆಲ್ಲಿಸಿ, ಇಂಥ ಮಾತು ಕೇಳೋಕೆ ನಮಗೇನು ಮಾನ ಮರ್ಯಾದೆ ಇಲ್ವಾ? ನನ್ನ ಮನಸ್ಸಿನ ಭಾವನೆ ಹೇಳಿದ್ದೇನೆ, ನಮಗೆ ನೀವು ಬೇಡ, ಮುಸಲ್ಮಾನರಿಗಾದರೂ ವಿಧೇಯರಾಗಿರಿ,' ಎಂದಿದ್ದಾರೆ.

'ಮತಗಳ ಓಲೈಕೆಗೆ ಹಿಂದೂಗಳಿಗೆ ಅವಮಾನ ಮಾಡೋದು ಬೇಡ. ಭಗವದ್ಗೀತೆಯನ್ನು ನಮ್ಮ ಧರ್ಮದವರೇ ಅಪಮಾನ ಮಾಡುವಾಗ ಕೇಳೋಕೆ ಆಗ ನಿಮ್ಮ ನಾಲಿಗೆ ಬಿದ್ದು ಹೋಗಿತ್ತಾ? ನನ್ನ ಮಾತನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ನಾನು ಯಾವ ಕೆಟ್ಟ ಭಾಷೆಯನ್ನೂ ಬಳಸಿಲ್ಲ. ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ನಮ್ಮ ಧರ್ಮವನ್ನು ಅಪಮಾನ ಮಾಡುವವರಿಗೆ ವಿನಂತಿ ಮಾಡುತ್ತೇನೆ, ದಯವಿಟ್ಟು ನಿಮಗೆ ಎಲ್ಲಿ ಇಷ್ಟವೋ ಅಲ್ಲೇ ಹೋಗಿಬಿಡಿ,' ಎಂದು ಆಗ್ರಹಿಸಿದ್ದಾರೆ ಜಗ್ಗೇಶ್.

ಅನಂತ ಕುಮಾರ್ ಹೇಳಿಕೆಗೆ ವಿರೋಧ:

ಸಂವಿಧಾನದ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, 'ಇಂಥ ಹೇಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಮೋದಿಯವರ ಕಾಲೆಳೆದಂತಾಗುತ್ತದೆ. ಮೋದಿಯವರನ್ನು ದಿಕ್ಕು ತಪ್ಪಿಸಿದಂತಾಗುತ್ತದೆ. ಯಡಿಯೂರಪ್ಪ ರಾಜ್ಯ ಸುತ್ತುತ್ತಿರುವ ಓಟವನ್ನು ನೀವು ಕಡಿಮೆ ಮಾಡಿದಂತಾಗುತ್ತದೆ. ನನ್ನ ಪ್ರಕಾರ ಇದು ಬೇಡದೇ ಇರುವ ವಿಚಾರ. ಅವರು ಯಾವ ದೃಷ್ಟಿಕೋನದಿಂದ ಹೇಳಿದರೋ ಗೊತ್ತಿಲ್ಲ. ಆದರೆ ಇದರಿಂದ ದೊಡ್ಡವರು ಮಾಡುತ್ತಿರುವ ಸಂಘಟನೆ ದಿಕ್ಕು ತಪ್ಪಿದಂತಾಗುತ್ತದೆ,' ಎಂದ ಜಗ್ಗೇಶ್, ಹೆಗಡೆ ಅವರ ಮಾತನ್ನು ವಿರೋಧಿಸಿದ್ದಾರೆ.