'ಕೆಲವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಅದು ಅವರ ನಡವಳಿಕೆಯಲ್ಲಿ ಇರುವುದಿಲ್ಲ,' ಎಂದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯನ್ನು ಟೀಕಿಸಿ, ' ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ', ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು: 'ಕೆಲವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಅದು ಅವರ ನಡವಳಿಕೆಯಲ್ಲಿ ಇರುವುದಿಲ್ಲ,' ಎಂದ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಯನ್ನು ಟೀಕಿಸಿ, ' ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ', ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಾನು ಅಹಿಂದ ಪರವಾಗಿಯೇ ಇದ್ದೇನೆ. ಹಾಗಂತ ಹೇಳಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ನಾನು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ,' ಎಂದರು.

'ಕರ್ನಾಟಕ ಹಸಿವು ಮುಕ್ತ ಆಗಬೇಕೆಂದು ಅನ್ನಭಾಗ್ಯ ಯೋಜನೆ ಘೋಷಿಸಿದೆವು. ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದಕ್ಕೂ ಟೀಕಿಸುತ್ತಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಲಾಯಿತು. ಇವತ್ತಿಗೂ ಕರ್ನಾಟಕ ರಾಜ್ಯ ಬಿಟ್ಟರೆ ಬೇರೆಲ್ಲೂ ಉಚಿತವಾಗಿ ಅಕ್ಕಿ ನೀಡಲಾಗುತ್ತಿಲ್ಲ. ಶಾಲಾ ಮಕ್ಕಳಿಗೆ ಹಾಲೂ ನೀಡಲಾಗುತ್ತಿದೆ,' ಎಂದು ಹೇಳಿದರು.

'ಇಂದಿರಾ ಕ್ಯಾಂಟೀನ್ ಮಾಡಲು ಹೊರಟಾಗಲೂ ಟೀಕಿಸಿದವರಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಪ್ರತಿಭಟನೆಗಳನ್ನೂ ಮಾಡಿದ್ರು. ಇನ್ನೆರಡು ತಿಂಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಮಾಡಲಾಗುತ್ತದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲಿದೆ. ಇದಕ್ಕಿಂತ ತೃಪ್ತಿ ಇನ್ನೇನಿದೆ? ಇಂದಿರಾ ಕ್ಯಾಂಟೀನ್‌ಗಳು ಬಂದ ಮೇಲೆ 'ಅಮ್ಮಾ ಕವಳಾ ತಾಯಿ' ಎಂದು ಕೇಳುತ್ತಿದ್ದ ಕೂಗು ಕಡಿಮೆಯಾಗಿದೆ. ರಾಜ್ಯದಲ್ಲಿ ಆತ್ಮಹತ್ಯೆ ಗಳು ಕಡಿಮೆಯಾಗ್ತಿವೆ. ಯಾರೇ ಆಗಲಿ ಆತ್ಮಹತ್ಯೆಯಂಥ ಕೃತ್ಯಕ್ಕೆ ಮುಂದಾಗಬಾರದು. ಕಷ್ಟಗಳು ಬಂದಾಗ ಸಾವು ಬಂದರೆ ಸಾಕು ಅಂತಾ ಬಯಸುತ್ತಾರೆ. ನಾನಂತೂ ನೂರಾ ಇಪ್ಪತ್ತೈದು ವರ್ಷ ಬದುಕಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದೇನೆ. ಬಡವರಿಗೆ ಸ್ಪಂದಿಸಲು ಕೇವಲ ಐವತ್ತಾರು ಇಂಚಿನ ಎದೆ ಇದ್ದರೆ ಸಾಲದು, ಹೃದಯ ಶ್ರೀಮಂತಿಕೆ ಇರಬೇಕು,' ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.