ಬಿಜೆಪಿ ಮುಖಂಡರು ಜಿಹಾದಿಗಳು: ಹೇಳಿಕೆಗೆ ಬದ್ಧವೆಂದ ದಿನೇಶ್ ಗುಂಡೂರಾವ್
'ಮುಂದೈತೆ ಮಾರಿಹಬ್ಬ' ಎನ್ನೋ ಅನಂತಕುಮಾರ್ ಹೆಗಡೆ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಶೋಭಾ ಕರಂದ್ಲಾಜೆಗೆ ಜಿಹಾದಿಗಳೆನ್ನದೇ, ಇನ್ನೇನು ಹೇಳಬೇಕು?, ಎಂದು ಪ್ರಶ್ನಿಸಿದ್ದಾರೆ ದಿನೇಶ್ ಗುಂಡುರಾವ್.
ಬೆಂಗಳೂರು: 'ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರನ್ನು ಜಿಹಾದಿಗಳು' ಎಂಬ ಹೇಳಿಕೆಗೆ ಬದ್ಧರಾಗಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಹೇಳಿಕೊಂಡಿದ್ದಾರೆ.
ಕೆಪಿಸಿಸಿಯಲ್ಲಿ ಮಾತನಾಡಿದ ಅವರು, 'ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಂದೈತೆ ಮಾರಿಹಬ್ಬ ಅಂತಾರೆ, ಶೋಭಾ ಕರಂದ್ಲಾಜೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮಾತನ್ನಾಡುತ್ತಾರೆ. ಇತರೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಆದ್ದರಿಂದ ಇವರನ್ನು ಜಿಹಾದಿಗಳು ಅನ್ನದೆ ಇನ್ನೇನೆಂದು ಕರೆಯಬೇಕು?,' ಎಂದು ಪ್ರಶ್ನಿಸಿದ್ದಾರೆ.
'ಧನ್ಯಶ್ರೀ ಆತ್ಮಹತ್ಯೆಗೆ ಕಾರಣರಾರು? ಧನ್ಯಶ್ರೀ ಹಿಂದು ಹೆಣ್ಣಮಗಳಲ್ಲವಾ? ಶೋಭಾ ಕರಂದ್ಲಾಜೆ ಲೋಕಸಭಾ ಕ್ಷೇತ್ರದವರಲ್ಲವಾ? ಅವಳ ಸಾವಿಗೆ ಬಿಜೆಪಿ ಕಾರ್ಯಕರ್ತ ಕಾರಣ ಅಲ್ಲವಾ? ಈ ಬಗ್ಗೆ ಶೋಭಾ ಕರಂದ್ಲಾಜೆ ಯಾಕೆ ಮಾತನಾಡುತ್ತಿಲ್ಲ,' ಎಂದು ದಿನೇಶ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಇದೇ ವೇಳೆ, ರಾಜ್ಯ ಸರ್ಕಾರದಕ್ಕೆ ಕೇಂದ್ರ ನೀಡಿರುವ ಅನುದಾನದ ಬಗ್ಗೆ ಕೇಳಲು ಅಮಿತ್ ಶಾ ಯಾರು? ಅಮಿತ್ ಶಾಗೆ ಕಾಮನ್ ಸೆನ್ಸ್ ಇಲ್ಲವೆಂದೂ ಅವರು ಆರೋಪಿಸಿದ್ದಾರೆ.