ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಿಜವಾದ ಆರೋಪಿಗಳನ್ನು ಆದಷ್ಟು ಬೇಗ ರಾಜ್ಯ ಸರ್ಕಾರ ಬಯಲಿಗೆ ತರಬೇಕು. ತಪ್ಪಿದಲ್ಲಿ ಗೌರಿ ಹತ್ಯೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಬೇಕಾಗುತ್ತದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮಂಗಳೂರು (ನ.13): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಿಜವಾದ ಆರೋಪಿಗಳನ್ನು ಆದಷ್ಟು ಬೇಗ ರಾಜ್ಯ ಸರ್ಕಾರ ಬಯಲಿಗೆ ತರಬೇಕು. ತಪ್ಪಿದಲ್ಲಿ ಗೌರಿ ಹತ್ಯೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರೋಪಿಸಬೇಕಾಗುತ್ತದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಧರ್ಮಪ್ರೇಮಿಗಳು ಭಾನುವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ‘ಎಡಪಂಥೀಯರ ಹತ್ಯೆ: ಹಿಂದೂಗಳ ಮೇಲೇಕೆ ಆರೋಪ?’ ಕುರಿತ ಸಾರ್ವಜನಿಕ ಜನಸಂವಾದದಲ್ಲಿ ಅವರು ಮಾತನಾಡಿದರು. ಇದುವರೆಗೆ ಎಡಪಂಥೀಯ ಸಂಘಟನೆಗಳು ಗೌರಿ ಹತ್ಯೆಯ ಆರೋಪವನ್ನು ಬಲಪಂಥೀಯ ಸಂಘಟನೆಗಳ ಮೇಲೆ ಹಾಕುತ್ತಿದ್ದವು. ಇದರಲ್ಲಿ ಯಾವುದೇ ಹುರುಳಿಲ್ಲ. ವಿನಾ ಕಾರಣ ಆರೋಪ ಮಾಡಬೇಡಿ ಎಂದರೂ ಇವರು ಕೇಳುವುದಿಲ್ಲ. ಹತ್ಯೆಗೆ ಮೊದಲು ಗೌರಿ ಲಂಕೇಶ್ ಎಡಪಂಥೀಯ ಸಂಘಟನೆಗಳ ಜೊತೆಗೆ ಟ್ವಿಟ್ ಮಾಡಿದ್ದಾರೆ. ಅವರು ಯಾರೊಂದಿಗೆ ಟ್ವಿಟ್ ಮಾಡಿದ್ದು ಹಾಗೂ ಯಾಕಾಗಿ ಮಾಡಿದರು ಎಂಬುದನ್ನು ಸರ್ಕಾರ ಯಾಕೆ ಪತ್ತೆ ಮಾಡುತ್ತಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದರು. ವೃಥಾ ಆರೋಪದಿಂದ ರೋಸಿ ಹೋಗಿರುವ ಹಿಂದೂ ಸಂಘಟನೆಗಳು ಈಗ ಗೌರಿ ಹತ್ಯೆಯನ್ನು ಮಾಡಿದ ನೈಜ ಆರೋಪಿಗಳನ್ನು ಬೇಗನೆ ಪತ್ತೆ ಮಾಡಿ ಎಂದು ಆಗ್ರಹಿಸುತ್ತಿವೆ. ಇದು ಸಾಧ್ಯವಿಲ್ಲ ಎಂದಾದರೆ, ಕೊಲೆಯನ್ನು ಯಾರು ನಡೆಸಿದ್ದು ಎಂದು ಸಾಬೀತುಪಡಿಸಬೇಕು. ಇಲ್ಲವೇ ಸರ್ಕಾರವೇ ಹತ್ಯೆ ನಡೆಸಿದ್ದು ಎಂದು ಹಿಂದೂ ಸಂಘಟನೆಗಳು ಆರೋಪಿಸಬೇಕಾಗುತ್ತದೆ. ಬಲಪಂಥೀಯರ ವಿರುದ್ಧ ಆರೋಪಿಸುವ ಎಡಪಂಥೀಯರನ್ನು ಸರ್ಕಾರ ವಿಚಾರಣೆ ನಡೆಸಿದರೆ ಸತ್ಯಸಂಗತಿ ಹೊರಗೆ ಬಂದೀತು ಎಂದು ಸೂಲಿಬೆಲೆ ಹೇಳಿದರು. ಚರ್ಚ್‌ಗಳಿಂದ ಬೇಹುಗಾರಿಕೆ: ಭಾರತದ ಚರ್ಚ್‌ಗಳಲ್ಲಿ ದೇಶದ ವಿರುದ್ಧವೇ ಗೂಢಚಾರಿಕೆ ನಡೆಯುತ್ತಿದೆ. ದೇಶದ ಸುರಕ್ಷತೆಯ ದೃಷ್ಟಿಯಿಂದ ಇದು ಗಂಭೀರ ಸಂಗತಿಯಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ಚರ್ಚ್‌ಗಳು ಹಣ ಸಂಗ್ರಹಿಸುವುದಲ್ಲದೆ ಮತಾಂತರ ನಡೆಸುತ್ತಿವೆ. ಇದೇ ರೀತಿ ಜಿಹಾದಿಗಳು ಕೂಡ ಹಿಂದೂಗಳ ನಾಶದ ಷಡ್ಯಂತರವನ್ನು ನಡೆಸುತ್ತಿವೆ. ಮಾವೋವಾದಿ ಸಂಘಟನೆಗಳು ಬುದ್ಧಿವಂತರ ಬೌದ್ಧಿಕತೆಯನ್ನು ನಾಶಪಡಿಸುತ್ತಿವೆ. ಇವರೆಲ್ಲರ ಮೂಲ ಉದ್ದೇಶ ಹಿಂದೂಗಳ ನಿರ್ನಾಮ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ಸಂಘಟನೆಗಳ ದೇಶ ವಿರೋಧಿ ಚಟುವಟಿಕೆಗೆ ಲಗಾಮು ಹಾಕಲಾಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಬೊಬ್ಬೆ ಹಾಕಲಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.