ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳ ಬಡಾವಣೆಯ ಪುರಾತನ ಲಕ್ಷ್ಮೀಕಾಂತಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ದಿಢೀರ್​ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರಿಂದ ವಿವಾದ ಭುಗಿಲೆದ್ದಿದೆ.

ಮೈಸೂರು (ನ.17): ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳ ಬಡಾವಣೆಯ ಪುರಾತನ ಲಕ್ಷ್ಮೀಕಾಂತಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆ ದಿಢೀರ್​ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರಿಂದ ವಿವಾದ ಭುಗಿಲೆದ್ದಿದೆ.

ಆಸ್ತಿಕ ಸಮೂಹವೊಂದು ಜೀರ್ಣೋದ್ಧಾರ ಮಾಡಿ ದೇವಾಲಯವನ್ನು ನಿರ್ವಹಣೆ ಮಾಡುತ್ತಿರುವಾಗಲೇ ಸ್ವಾಧೀನಕ್ಕೆ ಮುಂದಾಗಿದ್ದರಿಂದ ಆಕ್ರೋಶ ವ್ಯಕ್ತವಾಗಿದತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕರಾದ ವಾಸು, ಜಿ.ಟಿ. ದೇವೇಗೌಡ, ವಿಧಾನಪರಿಷತ್​ ಮಾಜಿ ಸದಸ್ಯ ಡಿ. ಮಾದೇಗೌಡ ಎಲ್ಲರೂ ಸಹ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕೆಲಕಾಲ ದಿಗ್ಭಂಧನಕ್ಕೆ ಒಳಗಾಗಿದ್ದ ಕಂದಾಯ ಇಲಾಖೆ ಸಿಬ್ಬಂದಿಯನ್ನು ವಿಮುಕ್ತಿಗೊಳಿಸಿದರು. ಈ ದೇವಾಲಯವು ಆದಿಚುಂಚನಗಿರಿ ಮಠಕ್ಕೆ ಸೇರಿದ್ದಾಗಿದ್ದು, ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ದೇವಾಲಯದ ಜೀರ್ಣೋದ್ಧಾರಕ್ಕಾಗಿ ಟ್ರಸ್ಟ್​ ರಚನೆ ಮಾಡಿ ಅದರಲ್ಲಿ ಹಲವು ಗಣ್ಯರನ್ನು ನೇಮಿಸಿದ್ದರು. ಎಲ್ಲರೂ ಒಟ್ಟುಗೂಡಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಈ ತನಕ ಯಾವುದೇ ವಿವಾದವಿರಲಿಲ್ಲ. ಆದರೆ ಇತ್ತೀಚಿಗೆ ಯಾರೋ ಭಕ್ತರು ಟ್ರಸ್ಟ್​ ವಿರುದ್ಧ ದೂರು ನೀಡಿದರೆಂದು ಟ್ರಸ್ಟಿಗೆ ಯಾವುದೇ ನೊಟೀಸ್​ ಕೊಡದೆ ಸ್ವಾಧೀನಕ್ಕೆ ಮುಂದಾಗಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಯಿತು.