- ರಾಜ್ಯದಲ್ಲು 50 ಹೊಸ ತಾಲೂಕುಗಳ ರಚನೆ- ಈ ತಿಂಗಳಿನಿಂದಲೇ ಹೊಸ ತಾಲೂಕುಗಳು ಕಾರ್ಯಾರಂಭ.- ಫೆಬ್ರವರಿಯಲ್ಲಿಯೇ ಬಜೆಟ್ ಅಧಿವೇಶನ ಆರಂಭ.

ಬೆಂಗಳೂರು: ರಾಜ್ಯದಲ್ಲಿ ಹೊಸ 50 ತಾಲೂಕುಗಳ ಪೈಕಿ ಬಹುತೇಕ ತಾಲೂಕುಗಳು ಈ ತಿಂಗಳಿನಿಂದಲೇ ಕಾರ್ಯಾರಂಭ ಮಾಡಲಿದ್ದು, ಆರಂಭಿಕ ಅನುದಾನವಾಗಿ ಪ್ರತಿ ಹೊಸ ತಾಲೂಕಿಗೆ ಐದು ಕೋಟಿ ರು.ಗಳನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. 

Add Asianetnews Kannada as a Preferred SourcegooglePreferred

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಾಲೂಕುಗಳ ಕೇಂದ್ರ ಕಚೇರಿಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ತೆರೆಯುವಂತೆ ಸೂಚಿಸಲಾಗಿದೆ. ಕೆಲವೆಡೆ ಕಟ್ಟಡಗಳು ಲಭ್ಯ ಇಲ್ಲದ್ದರಿಂದ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆಯುವಂತೆಯೂ ಹೇಳಲಾಗಿದೆ. ಒಂದೆರಡು ಕಡೆಗಳಲ್ಲಿ ತೊಂದರೆ ಇರುವುದು ಬಿಟ್ಟರೆ ಉಳಿದೆಲ್ಲ ಕಡೆ ಇದೇ ತಿಂಗಳಲ್ಲಿ ತಾಲೂಕು ಕೇಂದ್ರ ಕಚೇರಿ ಕಾರ್ಯಾರಂಭ ಮಾಡಲಿವೆ ಎಂದರು. 

ಆರಂಭಿಕ ಅನುದಾನವಾಗಿ ಐದು ಕೋಟಿ ರು.ಗಳನ್ನು ಒದಗಿಸಲಾಗುತ್ತಿದ್ದು, ಉಳಿದ ಅನುದಾನವನ್ನು ಹಂತ ಹಂತವಾಗಿ ನೀಡಲಾಗುವುದು. ಪ್ರತಿ ತಾಲೂಕಿಗೆ 10 ಕೋಟಿ ರು. ಹಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಸಂಪೂರ್ಣ ಅನುದಾನವನ್ನು ಒಂದೇ ಸಲ ಬಿಡುಗಡೆ ಮಾಡುವುದು ಕಷ್ಟಕರ. ಅಗತ್ಯತೆ ನೋಡಿಕೊಂಡು ಕ್ರಮೇಣ ಅನುದಾನ ಒದಗಿಸಲಾಗುವುದು. 

ಅಗತ್ಯವಾದರೆ ತಾಲೂಕಿಗೆ 20 ಕೋಟಿ ನೀಡಲು ತೊಂದರೆ ಇಲ್ಲ ಎಂದು ಹೇಳಿದರು. ಹೊಸ ತಾಲೂಕಿಗಳಿಗೆ ತಹಸೀಲ್ದಾರ್‌ಗಳ ಕೊರತೆ ಇದೆ ಎಂಬುದು ಸುಳ್ಳು. ಹೊಸ ತಾಲೂಕುಗಳಿಗೆ ಅಧಿಕಾರಿಗಳ ನಿಯೋಜನೆ ಮಾಡಲಾಗುತ್ತಿದೆ. ಸದ್ಯ 160 ಮಂದಿ ಗೆಜೆಟೆಡ್ ಪ್ರೊಬೆಶನರಿ ಪರೀಕ್ಷೆ ಉತ್ತೀರ್ಣರಾದವರು ತಹಶೀಲ್ದಾರ್ ಹುದ್ದೆಯ ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿ ತಹಶೀಲ್ದಾರಗಳ ಕೊರತೆ ಆಗುವುದಿಲ್ಲ. ಉಳಿದ ಸಿಬ್ಬಂದಿ ನಿಯೋಜನೆ ಕೂಡ ನಡೆಯುತ್ತಿದೆ ಎಂದು ತಿಳಿಸಿದರು. ರಾಜ್ಯದ ಬೆಳಗಾವಿ, ಧಾರವಾಡ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ಸರಿ ಸುಮಾರು 2 ಲಕ್ಷ ಮಂದಿ ಇನಾಮ್ ಭೂಮಿಯ ಸೌಲಭ್ಯ ಪಡೆದಿಲ್ಲ. ಹೀಗಾಗಿ ಇನಾಮ್ ರದ್ದತಿ ಕಾಯ್ದೆಯ ಸೆಕ್ಷನ್ 14ರ ತಿದ್ದುಪಡಿ ತಂದು ಅರ್ಜಿ ಸಲ್ಲಿಸದೇ ಇರುವವರಿಗೆ ಮತ್ತಷ್ಟು ದಿನ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. 

ಇದೇ ವೇಳೆ ಗ್ರಾಮೀಣ ಮತ್ತು ನಗರ ಪ್ರದೇಶದ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಫೆಬ್ರವರಿ 15ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವುದನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.

ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನ 


ಫೆಬ್ರವರಿ ತಿಂಗಳಲ್ಲೇ ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ನಡೆಸಲಾಗುವುದು. ಈ ಬಗ್ಗೆ ಒಂದೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.