ಅ.11 ರಿಂದ ಧಾರವಾಡದಲ್ಲಿ ರಾಜ್ಯ ಮಟ್ಟದ ಹೊನಲು-ಬೆಳಕಿನ ಕಬಡ್ಡಿ
ರಾಜ್ಯ ಮಟ್ಟದ ಹೊನಲು-ಬೆಳಕು ಕಬಡ್ಡಿ| ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಮೈದಾನದಲ್ಲಿ ಪಂದ್ಯಗಳು| ರಾಜ್ಯದ 30 ಜಿಲ್ಲೆಗಳಿಂದ 800 ಕ್ರೀಡಾಪಟುಗಳು ಭಾಗಿ| ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ|
ಧಾರವಾಡ(ಅ.10): ಮೊಟ್ಟಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೊನಲು- ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಅ. 11 ರಿಂದ 3 ದಿನಗಳ ಕಾಲ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದ ಮ್ಯಾಟ್ (ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನ) ಮೇಲೆ ನಡೆಸಲಾಗುತ್ತಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕಿ ಶಾರದಾ ಕಿರೇಸೂರ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯು ಕಡ್ಡಾಯವಾಗಿ ಮ್ಯಾಟ್ ಮೇಲೆಯೇ ಆಡಿಸಲಾಗತ್ತಿದೆ. ಆದರೆ, ರಾಜ್ಯ ಮಟ್ಟದ ಕ್ರೀಡೆಗಳು ಮಾತ್ರ ಬಯಲು ಮೈದಾನದಲ್ಲಿ ನಡೆಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಗಳು ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜ. ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಈ ಕ್ರೀಡಾಕೂಟವು ನಾಕೌಟ್ ಪದ್ಧತಿಯಲ್ಲಿ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳ 800 ಬಾಲಕ- ಬಾಲಕಿಯರು ಭಾಗವಹಿಸಿದ್ದಾರೆ. ಒಳಾಂಗಣದ ಕ್ರೀಡಾಂಗಣದಲ್ಲಿ ನೆಲಹಾಸಿನ ನಾಲ್ಕು ಅಂಕಣಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಾಲಕ- ಬಾಲಕಿಯರಿಗೆ ವಿವಿಧ ಕಾಲೇಜುಗಳಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಆಟಗಾರರಿಗೆ ವಸತಿ ನಿಲಯದಿಂದ ಕ್ರೀಡಾಂಗಣದ ವರೆಗೆ ಬಸ್ ಸೌಕರ್ಯ ಒಗಿಸಲಾಗುವುದು. ಕ್ರೀಡಾಕೂಟದಲ್ಲಿ 70 ಜನ ಪರಿಣಿತ ನಿರ್ಣಾಯಕರು ಕಾರ್ಯನಿರ್ವಹಿಸಲಿದ್ದು, ನಿಯಮಾವಳಿಯಂತೆ ಕ್ರೀಡಾಕೂಟದಲ್ಲಿ ವಿಜೇತ ತಂಡಗಳು ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.