ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ: ಮಾರಕಾಸ್ತ್ರ ವಶ
ರೌಡಿಗಳನ್ನು ಹೆಡೆಮುರಿ ಕಟ್ಟಲು ನಡೆಸುತ್ತಿರುವ ರೌಡಿಶೀಟರ್ ಮನೆಗಳ ಮೇಲಿನ ದಾಳಿ ನಡೆಸಿದ ಪೊಲೀಸರು| ದಸರಾ ಹಬ್ಬದಂದು ದಾಳಿ ನಡೆಸುವ ಮೂಲಕ ರೌಡಿಗಳಿಗೆ ಶಾಕ್ ನೀಡಿದ ಪೊಲೀಸರು| ಈ ವೇಳೆ ಕೆಲವೆಡೆ ಮಾರಕಾಸ್ತ್ರ ಕೂಡ ಪತ್ತೆಯಾಗಿವೆ|
ಹುಬ್ಬಳ್ಳಿ(ಅ.9): ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ರೌಡಿಗಳನ್ನು ಹೆಡೆಮುರಿ ಕಟ್ಟಲು ನಡೆಸುತ್ತಿರುವ ರೌಡಿಶೀಟರ್ ಮನೆಗಳ ಮೇಲಿನ ದಾಳಿ ಮಂಗಳವಾರವೂ ಮುಂದುವರಿಯಿತು. ದಸರಾ ಹಬ್ಬದಂದು ದಾಳಿ ನಡೆಸುವ ಮೂಲಕ ರೌಡಿಗಳಿಗೆ ಪೊಲೀಸ್ ಕಮಿಷನರೇಟ್ ಶಾಕ್ ನೀಡಿದೆ. ಈ ವೇಳೆ ಕೆಲವೆಡೆ ಮಾರಕಾಸ್ತ್ರ ಕೂಡ ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವರ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಆರ್.ದಿಲೀಪ್ ನಿರ್ದೇಶನದಲ್ಲಿ ಮಂಗಳವಾರ ಮಹಾನಗರದ 15 ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. 4 ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಡಿ.ಎಲ್. ನಾಗೇಶ, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ. ಸಂದಿಗವಾಡ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಸಿಪಿಐ, ಪಿಎಸ್ಐಗಳು ದಾಳಿಯಲ್ಲಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಧಾರವಾಡದ ಉಪ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಉಪ ಆಯುಕ್ತ ಡಾ. ಶಿವಕುಮಾರ ಗುಣಾರೆ ನಿರ್ದೇಶನದಲ್ಲಿ ಎಸಿಪಿ ಎಂ.ಎನ್. ರುದ್ರಪ್ಪ ನೇತೃತ್ವದಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 7 ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ, ತಲಾಶ್ ನಡೆಸಿ, ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದ ಮಹಾನಗರದಲ್ಲಿ ಚೂರಿ ಇರಿತ, ಶೂಟೌಟ್, ಕೊಲೆಗಳಂಥ ಅಪರಾಧ ಕೃತ್ಯಗಳು ಆಗಾಗ ನಡೆಯುತ್ತಿದೆ. ಇದರಿಂದಾಗಿ ಪೊಲೀಸ್ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತ್ತೀಚಿಗೆ ಸಭೆಯನ್ನೂ ನಡೆಸಿ ರೌಡಿಗಳನ್ನು ಮಟ್ಟಹಾಕುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಹಳೆ ರೌಡಿ ಶೀಟರ್ಗಳ ಮನೆಗಳ ಮೇಲೆ ಪೊಲೀಸ್ ಕಮಿಷನರೇಟ್ ದಾಳಿ ನಡೆಸುತ್ತಿದೆ.