ಮುಂಗಾರು ಬೆಳೆ ಹೋಯ್ತು.. ಹಿಂಗಾರು ಕೈ ಹತ್ತಲಿಲ್ಲ! ಕಂಗಾಲಾದ ರೈತರು
ವರ್ಷದ ಎರಡೂ ಹಂಗಾಮು ಬೆಳೆ ಕಳೆದುಕೊಂಡು ರೈತನ ಬದುಕು ಮಸುಕಾಯಿತು| ಆಗಸ್ಟ್ನಲ್ಲಿ ಮುಂಗಾರು, ಅಕ್ಟೋಬರ್ನಲ್ಲಿ ಹಿಂಗಾರು ಬೆಳೆ ಹಾನಿ| ಕಳೆದ 5 ದಿನಗಳಲ್ಲಿ ವಾಡಿಕೆ 18 ಮಿ.ಮೀ. ಪೈಕಿ 156 ಮಿ.ಮೀ. ಮಳೆ| 2,565 ಹೆಕ್ಟೇರ್ ಹಿಂಗಾರು ಬಿತ್ತನೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿ| ಹಿಂಗಾರು ಬಿತ್ತನೆಗೂ ಅವಕಾಶ ನೀಡುತ್ತಿಲ್ಲ ಈ ಮಳೆರಾಯ|
ಬಸವರಾಜ ಹಿರೇಮಠ
ಧಾರವಾಡ(ಅ.26): ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಗೆ ಮುಂಗಾರು ಬೆಳೆ ಹೋಯ್ತು... ಅಕ್ಟೋಬರ್ನಲ್ಲಿ ಸುರಿದ ಮಹಾ ಮಳೆಗೆ ಹಿಂಗಾರು ಬೆಳೆಯೂ ಹೋಯ್ತು. ವರ್ಷದ ಗಂಜಿಗೆ ಆಧಾರವಾಗಿದ್ದ ಬೆಳೆಗಳು ಬರದೇ ಧಾರವಾಡ ಜಿಲ್ಲೆಯ ರೈತರ ಬದುಕು ಮಸುಕಾಗಿದೆ...
ಕಳೆದ ಆಗಸ್ಟ್ನಲ್ಲಾದ ಅತಿವೃಷ್ಟಿಯಿಂದಾಗಿ 1.32 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 40 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ 1.70 ಲಕ್ಷ ಹೆಕ್ಟೇರ್ ಮುಂಗಾರು ಬೆಳೆ ಹಾನಿಯಾದ ಪರಿಣಾಮ, ಹಿಂಗಾರು ಬೆಳೆಗಳ ಮೇಲೆ ರೈತರು ತುಂಬ ನಿರೀಕ್ಷೆ ಇಟ್ಟಿದ್ದರು. ಆದರೆ, ಇದೀಗ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಆದ ಅಲ್ಪ ಪ್ರಮಾಣದ ಹಿಂಗಾರು ಬೆಳೆಯೂ ನೀರಿನಲ್ಲಿ ನಿಂತಿದೆ. ಅಲ್ಲದೇ ಇನ್ನೂ ಬಿತ್ತನೆಗೆ ಬಾಕಿ ಉಳಿದ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬಿತ್ತನೆಯೇ ಆಗದಂತಹ ಸ್ಥಿತಿ ಉಂಟಾಗಿದೆ.
ಶೇ. 799 ರಷ್ಟು ಮಳೆ:
ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್ ಪೂರ್ಣ ತಿಂಗಳಲ್ಲಿ ಜಿಲ್ಲೆಯಲ್ಲಿ 96 ಮಿ.ಮೀ. ವಾಡಿಕೆ ಮಳೆ. ಆದರೆ, ಆಗಿದ್ದು ಬರೋಬ್ಬರಿ 263 ಮಿ.ಮೀ. ಅದರಲ್ಲೂ ಕಳೆದ ಐದು ದಿನಗಳಲ್ಲಿ ವಾಡಿಕೆ 18 ಮಿ.ಮೀ. ಪೈಕಿ ಆಗಿದ್ದು 156 ಮಿ.ಮೀ. (ಶೇ. 799 ರಷ್ಟು). ಈ ರೀತಿ ನಿರಂತರ ಸುರಿಯುತ್ತಿರುವ ಮಳೆಯಿಂದ ಇನ್ನೇನು ಕೈಗೆ ಬಂದಿದ್ದ ಮುಂಗಾರಿನ ಶೇಂಗಾ, ಹತ್ತಿ, ಗೋವಿನ ಜೋಳ ಹಾಳಾಗಿರುವುದಲ್ಲದೇ ಹಿಂಗಾರಿನಲ್ಲಿ ಬಿತ್ತನೆ ಮಾಡಿದ್ದ 500 ಹೆಕ್ಟೇರ್ನಲ್ಲಿದ್ದ ಕಡಲೆ, ಜೋಳ ಹಾಳಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಧಾರವಾಡ, ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ಸಾಂಪ್ರದಾಯಿಕ ಬೆಳೆಗಳು ಹಾಳಾದರೆ, ಕಲಘಟಗಿ ಹಾಗೂ ಅಳ್ನಾವರ ಭಾಗದಲ್ಲಿ ವಾಣಿಜ್ಯ ಬೆಳೆಯಾದ ಕಬ್ಬು ಸಂಪೂರ್ಣ ನೆಲಕಚ್ಚಿದೆ. ಅದರಲ್ಲೂ ಅಳ್ನಾವರದಲ್ಲಿ ಸಂಪೂರ್ಣ ಕಬ್ಬು ಬೆಳೆ ಮಳೆಗೆ ಬಿದ್ದು ಹೋಗಿದೆ. ಆಗಸ್ಟ್ ತಿಂಗಳಲ್ಲೂ ತುಂಬ ಹಾನಿ ಕಂಡಿರುವ ಅಳ್ನಾವರ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿಯಾಗುವ ಮೂಲಕ ರೈತರಿಗೆ ಬರಸಿಡಿಲು ಬಡಿದಂತಾಗಿದೆ.
ಅತಿಯಾದ ಮಳೆಯಿಂದ ಬಹುತೇಕ ಎಲ್ಲ ಹೊಲಗಳಲ್ಲಿ ನೀರು ನಿಂತಿದ್ದು ಬಿತ್ತನೆಗೂ ಹೊಲಗಳು ಯೋಗ್ಯವಲ್ಲದ ಸ್ಥಿತಿಗೆ ಬಂದಿವೆ. ಇದರೊಂದಿಗೆ ಹಳ್ಳಗಳು ಹರಿದು, ಕೆರೆ ಕಟ್ಟೆಗಳು, ಒಡ್ಡುಗಳು ಒಡೆದು ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಹೊಲಗಳನ್ನು ಗುರುತಿಸುವ ಕಲ್ಲು, ಒಡ್ಡುಗಳು ಕಿತ್ತು ಹೋಗಿದ್ದ ಹೊಲಗಳ ನಕಾಶೆಯೇ ಬದಲಾಗಿದ್ದು ರೈತರಲ್ಲಿ ಆತಂಕ ಮೂಡಿದೆ.
ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತಿದ್ದ ದೀಪಾವಳಿ ಈ ಬಾರಿ ರೈತರ ಪಾಲಿಕೆ ಮಂಕಾಗಲಿದೆ. ಮುಂಗಾರು ಬೆಳೆ ಇಷ್ಟೊತ್ತಿಗೆ ಕೈಗೆ ಬಂದು ಕೈಯಲ್ಲಿ ದುಡ್ಡಿರುತ್ತಿತ್ತು. ಜತೆಗೆ ಹಿಂಗಾರು ಸಹ ಬಿತ್ತನೆ ಆಗಿರುತ್ತಿತ್ತು. ಈಗ ಏನೂ ಇಲ್ಲದೇ ಖಾಲಿ ಕೈಯಲ್ಲಿ ರೈತರು ಕುಳಿತುಕೊಂಡಿದ್ದಾರೆ. ಸರ್ಕಾರದ ಬೆಳೆವಿಮೆ, ಬೆಳೆಹಾನಿ ಪರಿಹಾರ ಯಾವುದೂ ಕೈಗೆ ಸಿಗುತ್ತಿಲ್ಲ. ಸರ್ಕಾರದ ಮೇಲೂ ಭರವಸೆ ಹೋಗಿದ್ದು, ರೈತರ ಭವಿಷ್ಯ ಬರಬರುತ್ತಾ ಮಂಕಾಗುತ್ತಿದೆ ಎಂದು ಯಾದವಾಡ ರೈತ ವಿಠ್ಠಲ ದಿಂಡಲಕೊಪ್ಪ ಬೇಸರ ವ್ಯಕ್ತಪಡಿಸುತ್ತಾರೆ.
ಹಿಂಗಾರು ಬಿತ್ತನೆಗೆ ಇನ್ನೂ ಇದೆ ಅವಕಾಶ
ಅತಿಯಾದ ಮಳೆಯಿಂದ ಮುಂಗಾರಿನಲ್ಲಿ 1.72 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿತ್ತು. ಈ ಕುರಿತು ಸರ್ಕಾರಕ್ಕೆ ವರದಿ ಸಹ ಸಲ್ಲಿಸಲಾಗಿದೆ. ಪ್ರಸ್ತುತ ಕಳೆದ ಹಿಂಗಾರು ಹಾನಿಯ ಪರಿಹಾರ ಧನ ವಿತರಣೆ ನಡೆಯುತ್ತಿದೆ. ಜತೆಗೆ ಪ್ರಸ್ತುತ ಮುಂಗಾರಿನ ಬೆಳೆಹಾನಿ ದಾಖಲೀಕರಣ ಆಗುತ್ತಿದೆ. ಸದ್ಯ 2,565 ಹೆಕ್ಟೇರ್ ಹಿಂಗಾರು ಬಿತ್ತನೆಯಾಗಿದ್ದು, ಇನ್ನೂ ನವೆಂಬರ್ ವರೆಗೂ ಕಡಲೆ ಹಾಗೂ ಜೋಳ ಬಿತ್ತನೆಗೆ ರೈತರಿಗೆ ಅವಕಾಶವಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀದ್ ಎಸ್.ಎಸ್ ಅವರು ಹೇಳಿದ್ದಾರೆ.