ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಪ್ರತಿ ದಿನ ಹಲವು ಗಣ್ಯರ ಭೇಟಿಯಾಗಿ ಸದ್ದು ಮಾಡುತ್ತಿದ್ದಾರೆ. ಇದೀಗ ಬಿಲ್ ಗೇಟ್ಸ್ ಮಹೀಂದ್ರ ಎಲೆಕ್ಟ್ರಿಕ್ ಆಟೋ ರೈಡ್ ಮಾಡಿದ್ದಾರೆ.ಈ ಕುರಿತು ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಮಾ.06): ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತ ಪ್ರವಾಸ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಸಚಿವರು, ಭಾರತದ ದಿಗ್ಗಜ ಉದ್ಯಮಿಗಳು ಸೇರಿದಂತೆ ಗಲವು ಗಣ್ಯರನ್ನು ಬಿಲ್ ಗೇಟ್ಸ್ ಭೇಟಿಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಲ್ ಗೇಟ್ಸ್ ಮಹೀಂದ್ರ ಕಂಪನಿಯ ಎಲೆಕ್ಟ್ರಿಕ್ ಆಟೋ ರಿಕ್ಷಾ ರೈಡ್ ಮಾಡಿದ್ದಾರೆ. ಬಿಲ್ ಗೇಟ್ಸ್ ಇತ್ತೀಚೆಗೆ ಉದ್ಯಮಿ ಆನಂದ್ ಮಹೀಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೇ ವೇಳೆ ಮಹೀಂದ್ರ ಕಂಪನಿಯ ಎಲೆಕ್ಟ್ರಿಕ್ ಟ್ರಿಯೋ ತ್ರಿಚಕ್ರ ವಾಹನ ರೈಡ್ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು ಸ್ವತಃ ಬಿಲ್ ಗೇಟ್ಸ್ ಪೋಸ್ಟ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಭಾರತದ ಕ್ರಿಯಾಶೀಲತೆ, ಹೊಸತನದ ಆವಿಷ್ಕಾರ ಪ್ರತಿ ಬಾರಿ ಎಲ್ಲರನ್ನೂ ಚಕಿತಗೊಳಿಸುತ್ತದೆ. ನಾನು ಎಲೆಕ್ಟ್ರಿಕ್ ಆಟೋ ರಿಕ್ಷಾ ರೈಡ್ ಮಾಡಿದೆ. ಈ ರಿಕ್ಷಾ ನಾಲ್ವರು ಪ್ರಯಾಣಿಕರನ್ನು ಹೊತ್ತು 131 ಕಿಲೋಮೀಟರ್ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ. ಮಹೀಂದ್ರ ಕಂಪನಿ ಶೂನ್ಯ ಕಾರ್ಬನ್ ಸಾರಿಗೆ ಆಂದೋಲನದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವುದು ಸ್ಪೂರ್ತಿಯಾಗಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್‌ಗೇಟ್ಸ್: ಡಿಜಿಟಲ್ ಕ್ರಾಂತಿ, ಆರೋಗ್ಯ ಕ್ಷೇತ್ರದ ಪ್ರಗತಿಗೆ ಶ್ಲಾಘನೆ

ಇತ್ತೀಚೆಗೆ ಬಿಲ್ ಗೇಟ್ಸ್ ಹಾಗೂ ಆನಂದ್ ಮಹೀಂದ್ರ ಮಾತುಕತೆ ತೀವ್ರ ಚರ್ಚೆಯಾಗಿತ್ತು. ಕಾರಣ ಆನಂದ್ ಮಹೀಂದ್ರ ಭೇಟಿಯಾದ ಬಿಲ್ ಗೇಟ್ಸ್, ಕೆಲ ಹೊತ್ತು ಮಹತ್ವದ ಮಾತುಕತೆ ನಡೆಸಿದ್ದರು. ಈ ವೇಳೆ ಬಿಲ್ ಗೇಟ್ಸ್ ತಮ್ಮ ಪುಸ್ತಕಗಳನ್ನು ಆನಂದ್ ಮಹೀಂದ್ರಗೆ ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಹಾಗೂ ಭೇಟಿ ಕುರಿತು ಸ್ವತಃ ಆನಂದ್ ಮಹೀಂದ್ರ ಮಾಹಿತಿ ಬಹಿರಂಗ ಪಡಿಸಿದ್ದರು.

ಟ್ವಿಟರ್ ಪೋಸ್ಟ್ ಮಾಡಿದ ಆನಂದ್ ಮಹೀಂದ್ರ, ಬಿಲ್ ಗೇಟ್ಸ್ ಉಡುಗೊರೆಯಾಗಿ ಪುಸ್ತಕ ನೀಡುವಾಗ ತಮ್ಮ ಸಹರಾಠಿಗೆ ಎಂದು ಬರೆದಿದ್ದರು. ಈ ವಿಚಾರ ಹಲವು ಚರ್ಚೆಗೆ ನಾಂದಿ ಹಾಡಿತ್ತು. ಆನಂದ್ ಮಹೀಂದ್ರ ಹಾಗೂ ಬಿಲ್ ಗೇಟ್ಸ್ ಜೊತೆಯಾಗಿ ವಿಧ್ಯಾಭ್ಯಾಸ ಮಾಡಿದ್ದಾರಾ? ಅನ್ನೋ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಇದಕ್ಕೆ ಉತ್ತರವನ್ನೂ ಹುಡುಕಲಾಗಿತ್ತು. ಹೌದು, ಆನಂದ್ ಮಹೀಂದ್ರ ಹಾಗೂ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಿಲ್ ಗೇಟ್ಸ್ ಅರ್ಧಕ್ಕೆ ವಿಧ್ಯಾಭ್ಯಾಸ ಮೊಟಕುಗೊಳಿಸಿದ್ದರೆ, ಆನಂದ್ ಮಹೀಂದ್ರ ಪದವಿ ಪಡೆದಿದ್ದರು. ಇದೇ ಕಾರಣಕ್ಕೆ ಬಿಲ್ ಗೇಟ್ಸ್ ಕ್ಲಾಸ್‌ಮೇಟ್ಸ್ ಎಂದು ಬರೆದು ಪುಸ್ತಕ ಉಡುಗೊರೆಯಾಗಿ ನೀಡಿದ್ದರು. ಈ ಕುರಿತ ಆನಂದ್ ಮಹೀಂದ್ರ ಟ್ವಿಟರ್ ಪೋಸ್ಟ್ ವೈರಲ್ ಆಗಿತ್ತು. 

View post on Instagram

ಬಿಲ್ ಗೇಟ್ಸ್ ಈಗಾಗಲೇ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಭೇಟಿ ಮಾಡಿದ ಬಿಲ್ ಗೇಟ್ಸ್, ಭಾರತದ ಕೊರೋನಾ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೋನಾ ಲಸಿಕೆ, ಉಚಿಕ ವಿತರಣೆ, ಸಾರ್ವಜನಿಕರ ಆರೋಗ್ಯ ಕಾಳಜಿ ಹಾಗೂ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರತನ್ ಟಾಟಾ ಭೇಟಿಯಾದ ಬಿಲ್ ಗೇಟ್ಸ್, ಆರೋಗ್ಯ ಕ್ಷೇತ್ರದಲ್ಲಿ ಜೊತೆಯಾಗಿ ಹೆಜ್ಜೆ!

ಕೋವಿಡ್‌ ವಿರುದ್ಧ ಹೋರಾಡಲು ಭಾರತ ರೂಪಿಸಿದ ಕೋ-ವಿನ್‌ ಜಗತ್ತಿಗೇ ಮಾದರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ ಭಾರತದ ಪ್ರಗತಿಯ ಕುರಿತು ನನ್ನ ಆಶಾಭಾವನೆ ಹಿಂದೆಂದಿಗಿಂತ ಹೆಚ್ಚಾಗಿದೆ. ಭಾರದ ಅಭಿವೃದ್ಧಿಪಡಿಸಿದ ಲಸಿಕೆಗಳು ಕೋವಿಡ್‌ ಸಮಯದಲ್ಲಿ ಲಕ್ಷಾಂತರ ಜನರ ಜೀವ ಉಳಿಸಿವೆ. ಅಲ್ಲದೆ ಜಗತ್ತಿನಾದ್ಯಂತ ಇವು ರೋಗಗಳನ್ನು ತಡೆಯುತ್ತಿವೆ. ಇಂತಹ ಜೀವರಕ್ಷಕ ಔಷಧಗಳನ್ನು ಭಾರತ ತಯಾರಿಸುವುದಷ್ಟೇ ಅಲ್ಲ, ತನ್ನ ಸಾರ್ವಜನಿಕ ಆರೋಗ್ಯ ಸೇವೆಯ ಮೂಲಕ ದಕ್ಷವಾಗಿ ವಿತರಣೆ ಮಾಡುತ್ತಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದರು.