ಯುವಕರ ಮೇಲಿನ ದೂರು ಹಿಂಪಡೆಯಲು ಮುಸ್ಲಿಂ ಸಂಘಟನೆ ಮನವಿ
ಹಸುಗಳನ್ನು ಊರಿಗೆ ಕರೆತರುವ ವೇಳೆ ಪಟಾಕಿ ಸಿಡಿಸಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಯುವಕರ ಮೇಲೆ ದಾಖಲಾಗಿರುವ ದೂರನ್ನು ಹಿಂಪಡೆಯಲು ಮುಸ್ಲಿಂ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ಮಂಗಳೂರು[ಜೂ. 24] ಮಂಗಳೂರಿನಲ್ಲಿ ದನ ಸಾಗಾಟದ ವೇಳೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವಕರ ಮೇಲೆ ದಾಖಲಾಗಿರುವ ಕೇಸುಗಳನ್ನು ಕೈ ಬಿಡುವಂತೆ ಮುಸ್ಲಿಂ ಹಿತರಕ್ಷಣಾ ವೇದಿಕೆ ಮನವಿ ಮಾಡಿದೆ.
ಮಂಗಳೂರು ಕಮಿಷನರ್ ಭೇಟಿಯಾಗಿ ಮನವಿ ಸಲ್ಲಿಸಿರುವ ಮುಖಂಡರು, ಜೋಕಟ್ಟೆಯಲ್ಲಿ ಹನೀಫ್ ದನ-ಕರುಗಳನ್ನು ಸಾಕುತ್ತಿದ್ದಾರೆ. ಆದರೆ ಪೊಲೀಸರು ಸುಳ್ಳು ಆರೋಪ ಹೊರಿಸಿ ಅವುಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯದಲ್ಲಿ ಅದನ್ನು ಬಿಡಿಸಿಕೊಂಡು ಬರಲಾಗಿದೆ. ಆಗಮನದ ವೇಳೆ ಅದು ಬರುವ ಮೊದಲು ಊರಿನ ಮಕ್ಕಳು ಸಂತೋಷದಿಂದ ಪಟಾಕಿ ಸಿಡಿಸಿದ್ದಾರೆ. ಆದರೆ ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ವೈರಲ್ ಮಾಡಿದ್ದು ಅದೇ ಆಧಾರದಲ್ಲಿ ಕೇಸ್ ಹಾಕಿರುವುದನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.