ಬಹುನಿರೀಕ್ಷೆಯ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಸಾರ್ವತ್ರಿಕ ಚುನಾವಣೆಗೆ ಇನ್ನೊಂದೇ ದಿನ ಬಾಕಿ. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ಆಖಾಡದಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಭಾನುವಾರ ಬೆಳಗ್ಗೆ 7 ಗಂಟೆಗೆ ಕೊನೆಗೊಂಡಿದೆ. ಮಂಗಳವಾರ ಪಾಲಿಕೆ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಫಲಿತಾಂಶ ನ.14 ರಂದು ಪ್ರಕಟವಾಗಲಿದೆ.

ಮಂಗಳೂರು(ನ.11): ಬಹುನಿರೀಕ್ಷೆಯ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳ ಸಾರ್ವತ್ರಿಕ ಚುನಾವಣೆಗೆ ಇನ್ನೊಂದೇ ದಿನ ಬಾಕಿ. ನಾಮಪತ್ರ ಸಲ್ಲಿಕೆ ಬಳಿಕ ಪ್ರಚಾರ ಆಖಾಡದಲ್ಲಿ ಪೂರ್ಣವಾಗಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಭಾನುವಾರ ಬೆಳಗ್ಗೆ 7 ಗಂಟೆಗೆ ಕೊನೆಗೊಂಡಿದೆ.

Add Asianetnews Kannada as a Preferred SourcegooglePreferred

ಮಂಗಳವಾರ ಪಾಲಿಕೆ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನ.14ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹಾಗೂ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯುವವರಾರು ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ. ಪಾಲಿಕೆಯ 60 ವಾರ್ಡ್‌ಗಳಲ್ಲಿ ಈ ಬಾರಿ 180 ಸ್ಪರ್ಧಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಟಿಕೆಟ್ ಪಡೆದವರು ತಮ್ಮ ಬೆಂಬಲಿಗರೊಂದಿಗೆ ಹಗಲು ರಾತ್ರಿಯೆನ್ನದೆ ಪ್ರಚಾರ ನಿರತರಾಗಿದ್ದರು.

ಕನ್ನಡ ಕಟ್ಟಿದವರು: ಉಚಿತವಾಗಿ ಕನ್ನಡ ಸುದ್ದಿ ಪತ್ರಿಕೆ ಹಂಚುವ ಪೇಪರ್ ಆಚಾರ್ಯ!

ಭಾನುವಾರ ಬೆಳಗ್ಗೆ ಬಹಿರಂಗ ಪ್ರಚಾರ ಅಂತ್ಯವಾದರೂ ತೆರೆಮರೆಯಲ್ಲಿ ಅಭ್ಯರ್ಥಿಗಳ ಪ್ರಚಾರ ನಡೆಯುತ್ತಲೇ ಇದೆ. ಬಹುತೇಕರು ವಾರ್ಡ್ ವ್ಯಾಪ್ತಿಯಲ್ಲಿ ಓಡಾಡುತ್ತ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.

ಕೈ-ಕಮಲ ನೇರ ಫೈಟ್:

ದ.ಕ. ಜಿಲ್ಲೆಯಲ್ಲಿ ಉಳಿದೆಲ್ಲ ಚುನಾವಣೆಗಳಂತೆ ಪಾಲಿಕೆಯಲ್ಲೂ ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಕಾಳಗ ನಡೆದಿದೆ. 1984ರಿಂದ ಇದುವರೆಗೆ ಒಟ್ಟು ಆರು ಚುನಾವಣೆಗಳು ನಡೆದಿದ್ದು, 5 ಬಾರಿ ಕಾಂಗ್ರೆಸ್ ಜಯ ಸಾಧಿಸಿದ್ದರೆ, ಒಂದು ಬಾರಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಕೊನೆಯ ಅವಧಿಯಲ್ಲಿ 35 ಸದಸ್ಯ ಬಲದೊಂದಿಗೆ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದರೆ, ಅತ್ತ ಬಿಜೆಪಿ 2ನೇ ಬಾರಿಗೆ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಮತದಾರನ ಚಿತ್ತ ಎನ್ನುವುದು ನಾಳೆ ನಿರ್ಧಾರವಾಗಲಿದ್ದು, ಅದರ ಫಲಿತಾಂಶಕ್ಕೆ ನ.14ರವರೆಗೆ ಕಾಯಬೇಕು.

ಇತರ ಪಕ್ಷಗಳು ಲೆಕ್ಕಕ್ಕಿಲ್ಲ:

ಕಳೆದ ಅವಧಿಯಲ್ಲಿ 35 ಸೀಟ್‌ಗಳನ್ನು ಕಾಂಗ್ರೆಸ್ ಗೆದ್ದಿದ್ದರೆ, ಬಿಜೆಪಿಯ 20ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಮೊದಲ ಬಾರಿಗೆ ಎಸ್‌ಡಿಪಿಐ ಪಾಲಿಕೆಯಲ್ಲಿ ತನ್ನ ಖಾತೆ ತೆರೆದಿತ್ತು. ಈ ಬಾರಿ ಈ ಎಲ್ಲ ಪಕ್ಷಗಳ ಜತೆಗೆ ಇದೇ ಮೊದಲ ಬಾರಿಗೆ ರವಿಕೃಷ್ಣಾರೆಡ್ಡಿ ಮುಂದಾಳತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರೂ ಹುಮ್ಮಸ್ಸಿನಿಂದ ಕಣದಲ್ಲಿದ್ದಾರೆ. ಆದರೆ ಪಾಲಿಕೆಯ ಇದುವರೆಗಿನ ಇತಿಹಾಸದಲ್ಲಿ ಕಾಂಗ್ರೆಸ್, ಬಿಜೆಪಿ ಬಿಟ್ಟರೆ ಇತರ ಪಕ್ಷಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ. ಈ ಬಾರಿ ಏನಾಗುತ್ತದೋ ಕಾದು ನೋಡಬೇಕು.

ಸಮರ ಸನ್ನದ್ಧರು:

ಕಾಂಗ್ರೆಸ್, ಬಿಜೆಪಿಯಿಂದ ತಲಾ 60 ಅಭ್ಯರ್ಥಿಗಳು, ಜೆಡಿಎಸ್‌ನಿಂದ 12 ಮಂದಿ, ಸಿಪಿಐಎಂ- 7, ಸಿಪಿಐ- 1, ಎಸ್‌ಡಿಪಿಐ- 6, ಜೆಡಿಯು- 2, ಡಬ್ಲ್ಯೂಪಿಐ- 3, ಕರ್ನಾಟಕ ರಾಷ್ಟ್ರ ಸಮಿತಿ- 2 ಹಾಗೂ 27 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಕಾಂಗ್ರೆಸ್ ತನ್ನ ಅಧಿಕಾರವಧಿಯ ಸಾಧನೆಗಳನ್ನು ಜನರ ಮುಂದಿಟ್ಟರೆ, ಬಿಜೆಪಿಯು ಮೋದಿ ವರ್ಚಸ್ಸು, 370ನೇ ವಿಧಿ ರದ್ದು ವಿಚಾರಗಳನ್ನು ಜನರ ಮುಂದಿಟ್ಟಿದೆ. ಮತದಾರರ ತೀರ್ಮಾನ ಇನ್ನೂ ನಿಗೂಢವಾಗಿಯೇ ಇದೆ.

ಇಲ್ಲಿ ಪ್ರತಿ ಮತವೂ ಅಮೂಲ್ಯ!

ಪಾಲಿಕೆಯ ಕ್ಷೇತ್ರ ವ್ಯಾಪ್ತಿ ಸೀಮಿತವಾಗಿರುವುದರಿಂದ ಒಂದೊಂದು ಮತವೂ ಇಲ್ಲಿ ಅಭ್ಯರ್ಥಿಗಳಿಗೆ ಅತಿ ಅಮೂಲ್ಯ. 2013ರ ಚುನಾವಣೆಯಲ್ಲಿ ಒಂದು ಕಡೆ ೨ ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಗೆದ್ದವರಿದ್ದರೆ, ಇನ್ನೊಂದೆಡೆ ಕೇವಲ 10, 11 ಮತಗಳಿಂದ ಸೋತವರೂ ಇದ್ದರು. ಅಂದು 16ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೇಶವ ಸನಿಲ್ ಕೇವಲ 10 ಮತಗಳ ಅಂತರದಿಂದ ಸೋತಿದ್ದರೆ, 11ನೇ ವಾರ್ಡ್‌ನಲ್ಲಿ ಹರಿಶ್ಚಂದ್ರ 11 ಮತಗಳಿಂದ ಸೋಲಿನ ರುಚಿ ಕಂಡಿದ್ದರು.

ಕೇಂದ್ರ ಮಾಜಿ ಸಚಿವ, ಹಿರಿಯ 'ಕೈ' ಮುಖಂಡನ ಕಟ್ಟಾ ಬೆಂಬಲಿಗರು ಬಿಜೆಪಿಗೆ