ಧರ್ಮಸ್ಥಳದಲ್ಲಿನ ಶವ ಹೂತಿಟ್ಟ ಪ್ರಕರಣದ ತನಿಖೆ ನಡುವೆ ಮಹತ್ವದ ಬೆಳವಣಿಗೆ ಆಗಿದೆ. ತನಿಖೆ ನಡೆಸುತ್ತಿರುವ ಎಸ್ಐಟಿಗೆ ಇದೀಗ ರಾಜ್ಯ ಸರ್ಕಾರ ಪೊಲೀಸ್ ಠಾಣೆ ಪವರ್ ನೀಡಿದೆ.

ಧರ್ಮಸ್ಥಳ (ಆ.08) ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣದ ಕುರಿತು ಎಸ್ಐಟಿ ತೀವ್ರ ತನಿಖೆ ನಡೆಸುತ್ತಿದೆ. ಮುಸುಕುದಾರಿ ದೂರುದಾರನ ಗಂಭೀರ ಆರೋಪದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡ ಹಲೆವೆಡೆ ಉತ್ಖನನ ಮಾಡಿದೆ. ಇದೀಗ ಧರ್ಮಸ್ಥ ಸಮೀಪದ ಕಲ್ಲೇರಿ, ಬೋಳಿಯಾರ್ ಬಳಿಯ ಕಾಡಿನಲ್ಲೂ ಉತ್ಖನನ ಮಾಡಲಾಗಿದೆ. ಇದರ ನಡುವೆ ಮಾಧ್ಯಮ ಹಾಗೂ ಯೂಟ್ಯೂಬರ್ಸ್ ಮೇಲಿನ ಹಲ್ಲೆ ಪ್ರಕರಣ, ಘರ್ಷಣೆಗಳು ಭಾರಿ ಸದ್ದು ಮಾಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಈ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ. ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ತನಿಖಾ ತಂಡಕ್ಕೆ ಪೊಲೀಸ್ ಠಾಣೆ ಅಧಿಕಾರ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಸ್ವತಂತ್ರವಾಗಿ ಎಫ್ಐಆರ್ ದಾಖಲಿಸಿ ತನಿಖೆಗೆ ಅವಕಾಶ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಅನ್ನೋ ಆರೋಪದಡಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಇದರಂತೆ ಎಸ್ಐಟಿ ಧರ್ಮಸ್ಥಳದ ಸುತ್ತ ಮುತ್ತಲಿನ ಕಾಡಿನಲ್ಲಿ ತನಿಖೆ ನಡೆಸುತ್ತಿದೆ. ಇದರ ನಡುವೆ ಬರುಡೆಗಾಗಿ ಉತ್ಖನನ ಕಾರ್ಯಾಚರಣೆ ವೇಳೆ ಬಂಗ್ಲಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಮುಸುಕುದಾರಿ ದೂರುದಾರ ಗುರುತಿಸದೇ ಇದ್ದ ಸ್ಥಳದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿತ್ತು. ಶವಗಳ ಪ್ರಕರಣ ಸಂಬಂಧ ಮತ್ತೊಬ್ಬರ ದೂರುದಾರ ಜಯನ್ ಬಾಲಕಿ ಮೃತದೇಹ ಹೂತುಹಾಕಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಮೇಲಿಂದ ಮೇಲೆ ಧರ್ಮಸ್ಥಳ ಪ್ರಕರಣದಲ್ಲಿ ಆರೋಪಗಳು, ದೂರುಗಳು ದಾಖಲಾಗುತ್ತಿರುವ ಸಂಬಂಧ ಇದೀಗ ರಾಜ್ಯ ಸರ್ಕಾರ ಎಸ್ಐಟಿಗೆ ವಿಶೇಷ ಅಧಿಕಾರ ನೀಡಿದೆ. ಎಸ್ಐಟಿಗೆ ಸ್ವತಂತ್ರವಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಅಧಿಕಾರ ನೀಡಿದೆ.

ಅಂತಿಮ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸುವ ಅವಕಾಶ

ಎಸ್ಐಟಿ ತನಿಖಾ ತಂಡ ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಹಾಗೂ ಕಾರ್ಯಾಚರಣೆ ವೇಳೆ ಅಗತ್ಯಬಿದ್ದಲಿ ಸ್ವತಂತ್ರವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಅವಕಾಶ ನೀಡಲಾಗಿದೆ. ಈ ತನಖಾ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಅಂತಿಮ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಸಲು ಪವರ್ ಕೊಡಲಾಗಿದೆ. ಎಸ್ಐಟಿ ತಂಡದಲ್ಲಿ ತನಿಖಗೆ ನೇಮಿಸಲ್ಪಟ್ಟ ಪೊಲೀಸ್ ಅಧಿಕಾರಿಯನ್ನು ನಿರೀಕ್ಷಕ ದರ್ಜೆ ಅಧಿಕಾರಿ ಠಾಣಾಧಿಕಾರಿ ಎಂದು ಘೋಷಣೆ ಮಾಡಿದ್ದಾರೆ. ಬಿಎನ್ಎಸ್ಎಸ್ ಅಡಿಯಲ್ಲಿ ಅಧಿಕಾರ ಚಲಾಯಿಸಿ ಸರ್ಕಾರ ಆದೇಶ ಮಾಡಿದೆ. BNSS 2023 ಕಲಂ 2(1)(u) ಅಡಿಯಲ್ಲಿ ಪೊಲೀಸ್ ಠಾಣೆ ಎಂದು, ಕಲಂ 2(1)(r) ಅಡಿಯಲ್ಲಿ ಠಾಣೆಗೆ ಠಾಣಾಧಿಕಾರಿ ಎಂದು ಘೋಷಣೆ ಮಾಡಲಾಗಿದೆ.

ಧರ್ಮಸ್ಥಳ ಪ್ರಕರಣ

ಮುಸುಕುದಾರಿ ದೂರುದಾರ ತಾನು ನೂರಾರು ಶವ ಹೂತಿಟ್ಟಿರುವುದಾಗಿ ಗಂಭೀರ ಆರೋಪ ಮಾಡಿದ್ದಾನೆ. ತಾನು ಧರ್ಮಸ್ಥಳದ ಮಾಜಿ ಸ್ವಚ್ಚತಾ ಕಾರ್ಮಿಕ ಎಂದು ಹೇಳಿಕೊಂಡಿದ್ದಾನೆ. ತನ್ನ ಕೆಲಸದ ಅವಧಿಯಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ. ಇವು ಸಹಜ ಸಾವಿನ ಶವವಲ್ಲ, ಮೃದೇಹಗಳಿಗೆ ಯಾವುದೇ ಮರಣೋತ್ತರ ಪರೀಕ್ಷೆ ನಡೆದಿಲ್ಲ ಎಂದು ಆರೋಪಿಸಿದ್ದ. ಈ ಆರೋಪಗಳು ಗಂಭೀರವಾಗುತ್ತಿದ್ದಂತೆ ರಾಜ್ಯ ಸರ್ಕಾರ ಜುಲೈ 19 ರಂದು ಎಸ್‌ಐಟಿ ರಚನೆ ಮಾಡಿತ್ತು. ಎಸ್ಐಟಿ ಅಧಿಕಾರಿಗಳ ಮುಸುಕುದಾರಿ ದೂರುದಾರನ ಕರೆಯಿಸಿಕೊಂಡು ಎರಡು ದಿನ ವಿಚಾರಣೆ ನಡೆಸಿತ್ತು. ಬಳಿಕ ದೂರುದೂರನ ಕರೆದುಕೊಂಡು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಸ್ಥಳ ಮಹಜರು ಮಾಡಿತ್ತು. ಈ ವೇಳೆ ಶವ ಹೂತಿಟ್ಟ 13 ಸ್ಥಳಗಳನ್ನು ದೂರುದಾರ ಗುರುತಿಸಿದ್ದ. ಈ ಪೈಕಿ 12 ಸ್ಥಳಗಳ ಉತ್ಖನನ ಕಾರ್ಯ ಮುಗಿದಿದೆ. 13ನೇ ಪಾಯಿಂಟ್ ಬಾಕಿ ಉಳಿದಿದೆ. ಇತ್ತ 6ನೇ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು.