ಮಂಗಳೂರಿನ ಯೆಯ್ಯಾಡಿ ಹರಕೆ ನೇಮ ವಿವಾದದ ಕುರಿತು ಮಾತನಾಡಿದ ತಮ್ಮಣ್ಣ ಶೆಟ್ಟಿಯವರು, ತಾವು ದೈವಾರಾಧನೆಯ ಲೋಪದೋಷಗಳ ಬಗ್ಗೆ ಮಾತ್ರ ಧ್ವನಿ ಎತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತುಳು ಭಾಷೆಯ ಬದಲು ಕನ್ನಡದಲ್ಲಿ ನುಡಿ ಹೇಳಿರುವುದು, ನಿಯಮ ಮುರಿದಿರುವುದನ್ನು ಆಕ್ಷೇಪಿಸಿದ್ದಾರೆ.

ಮಂಗಳೂರು: ನಗರದ ಯೆಯ್ಯಾಡಿ ಬಾರೆಬೈಲ್‌ನಲ್ಲಿ ನಡೆದ ಹರಕೆ ನೇಮ ವಿವಾದಕ್ಕೆ ಸಂಬಂಧಿಸಿ ವೈಯಕ್ತಿಕವಾಗಿ ಕ್ಷೇತ್ರ, ದೈವ ಹಾಗೂ ಆಡಳಿತ ಮಂಡಳಿ ಬಗ್ಗೆ ಧ್ವನಿಯೆತ್ತಿಲ್ಲ. ದೈವಾರಾಧನೆ ವೇಳೆ ಕಂಡುಬಂದಿರುವ ಲೋಪದೋಷಗಳನ್ನು ಮಾತ್ರ ಸಮಾಜಕ್ಕೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಸಾಮಾಜಿಕ ಮುಂದಾಳು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.

ಕ್ಷೇತ್ರವನ್ನು ಪ್ರತಿಷ್ಠೆ, ಪ್ರಶಸ್ತಿಗಾಗಿ ದುರುಪಯೋಗ ಮಾಡಿರುವುದು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರಂದಾಯ ಕ್ಷೇತ್ರವನ್ನು ಪ್ರತಿಷ್ಠೆ, ಪ್ರಶಸ್ತಿಗಾಗಿ ದುರುಪಯೋಗ ಮಾಡಿರುವುದು, ಅಪಪ್ರಚಾರ ಮಾಡಿರುವುದು ಯಾರೆಂದು ಸ್ಪಷ್ಟವಾಗಬೇಕಿದೆ. ದೈವದ ಕ್ಷೇತ್ರದಲ್ಲಿ ಏರು ದನಿಯಲ್ಲಿ ಮಾತನಾಡಬಾರದು. ಕಾರಣಿಕದ ಸ್ಥಳದಲ್ಲಿ ಸುಳ್ಳು ಸಂದೇಶ ನೀಡಬಾರದು. ತೆಂಬರೆ ಕೋಲಿನಿಂದ ದೌರ್ಜನ್ಯ ಎಸಗಬಾರದು. ಆದರೆ ಅದೆಲ್ಲವೂ ಆ ಕ್ಷೇತ್ರದಲ್ಲಿ ನಡೆದಿದೆ ಎಂದು ಅವರು ಆಕ್ಷೇಪಿಸಿದರು.

ದೈವ ಸಂಬಂಧಿತ ಪ್ರಾರ್ಥನೆ ಕನ್ನಡದಲ್ಲಿ ನಡೆಯುವುದಲ್ಲ

ದೈವಾರಾಧನೆಯ ಇತಿಹಾಸದಲ್ಲಿ ದೈವ ಸಂಬಂಧಿತ ಪ್ರಾರ್ಥನೆ ಮಾತೃ ಭಾಷೆಯಾದ ತುಳುವಿನಲ್ಲಿಯೇ ಆಗಬೇಕು. ಆದರೆ ಹರಕೆ ನೇಮದ ವೇಳೆ ಕನ್ನಡದಲ್ಲಿ ನಡೆದಿದೆ. ಚಲನಚಿತ್ರ ನಟರಿಗಾಗಿ ನಿಯಮಗಳನ್ನು ಮುರಿದು ಹರಕೆ ನೇಮ ಮಾಡುವುದು, ಅವರಿಗೆ ಬೇಕಾದ ಭಾಷೆಯಲ್ಲಿ ನುಡಿ ಹೇಳುವುದು ನಡೆಯುತ್ತಾ ಸಾಗಿದರೆ ಮುಂದೆ ತುಳುನಾಡಿನ ನಂಬಿಕೆಯ ದೈವಾರಾಧನೆ ಪ್ಯಾನ್‌ ಇಂಡಿಯಾ ಆಗಿ ಬದಲಾಗುವ ಆತಂಕವಿದೆ. ದೈವಾರಾಧನೆಯಲ್ಲಿ ಮಾಂತ್ರಿಕ ದೃಷ್ಟಿ ಇರದೆ ಕಾರಣಿಕದ ದೃಷ್ಟಿ ಹೊಂದಿರಬೇಕು. ದೈವಾರಾಧನೆಯನ್ನು ವ್ಯಾಪಾರ, ವ್ಯವಹಾರಕ್ಕೆ ಬಳಸಬಾರದು. ಸಂಪ್ರದಾಯ ಮುರಿಯದೆ ದೈವಾರಾಧನೆಯನ್ನು ಮುಂದುವರಿಸಬೇಕೆಂಬುದು ನನ್ನ ಕಳಕಳಿಯಾಗಿದೆ ಎಂದು ತಮ್ಮಣ್ಣ ಶೆಟ್ಟಿ ಹೇಳಿದರು.

ಬಾರೆಬೈಲ್‌ನ ಜಾರಂದಾಯ ಬಂಟ ದೈವಸ್ಥಾನದಲ್ಲಿ ಹೊಂಬಾಳೆ ತಂಡ ಇತ್ತೀಚೆಗೆ ಹರಕೆ ನೇಮ ನೀಡಿದ ಕುರಿತಂತೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ನನ್ನ ಮೇಲೆ ತಪ್ಪು ಆರೋಪ ಮಾಡಲಾಗಿದೆ. ನನ್ನ ವಿರುದ್ಧ ಕಳ್ಳತನದ ಆರೋಪ ಸರಿಯಲ್ಲ. ಆರೋಪ ಮಾಡಿದವರು ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಿ ಎಂದು ಹೇಳಿದರು.

ದೈವಾರಾಧನೆಗೆ ಅನ್ಯ ಧರ್ಮೀಯರಿಂದ ಯಾವುದೇ ಅಪಪ್ರಚಾರ ನಡೆದಿಲ್ಲ

ತುಳುನಾಡಿನಲ್ಲಿ ದೈವಾರಾಧನೆಗೆ ಅನ್ಯ ಧರ್ಮೀಯರಿಂದ ಯಾವುದೇ ಅಪಪ್ರಚಾರ ನಡೆದಿಲ್ಲ. ಬದಲಾಗಿ ಇಲ್ಲಿನ ಕ್ರೈಸ್ತರು, ಮುಸಲ್ಮಾನರನ್ನು ಒಳಗೊಂಡು ದೈವಾರಾಧನೆಗಳು ನಡೆಯುತ್ತಿವೆ. ಹಾಗಾಗಿ ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಬೇಡ ಎಂದು ಪ್ರಶ್ನೆಯೊಂದಕ್ಕೆ ತಮ್ಮಣ್ಣ ಶೆಟ್ಟಿ ಪ್ರತಿಕ್ರಿಯಿಸಿದರು.