ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದಡಿ ಸೋಮೇಶ್ವರ ಬೀಚ್‌ನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಸೈಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಕಡಲತೀರದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ, ಸಮುದ್ರ ತೀರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಜನವರಿ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಸೋಮೇಶ್ವರ ಬೀಚ್‌ನಲ್ಲಿ ಜರುಗಿತು.ಸೈಂಟ್ ಅಲೋಶಿಯಸ್ ಕೋಟೇಕಾರ್ ಬೀರಿ ಕ್ಯಾಂಪಸ್‌ನ ಫಾ.ಅವಿನಾಶ್ ಡಿಸೋಜ ಮತ್ತು ಹಿರಿಯ ಸ್ವಯಂಸೇವಕ ಅನಿರುದ್ಧ ನಾಯಕ್ ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ತಾರಾನಾಥ್ ಆಳ್ವ, ಉದಯ ಕೆ.ಪಿ. ಸೇರಿದಂತೆ ಹಲವು ಹಿರಿಯ ಸ್ವಯಂಸೇವಕರು ಇದ್ದರು.

Add Asianetnews Kannada as a Preferred SourcegooglePreferred

ಈ ತಿಂಗಳ ಶ್ರಮದಾನ ವಿಶೇಷವಾಗಿದ್ದು, ಸಂಪೂರ್ಣವಾಗಿ ಬೀಚ್ ಕ್ಲೀನಿಂಗ್ ಮೇಲೆ ಕೇಂದ್ರೀಕೃತವಾಗಿತ್ತು. ಸಮುದ್ರ ತೀರದ ಸಂರಕ್ಷಣೆ ಮತ್ತು ಕಡಲ ತೀರದ ಪ್ಲಾಸ್ಟಿಕ್ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಧ್ಯೇಯವಾಗಿತ್ತು.

ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಮತ್ತು ಕಸ

ಸೈಂಟ್ ಅಲೋಶಿಯಸ್ ಪಿಜಿ ಸೆಂಟರ್‌ ಪ್ರಾಧ್ಯಾಪಕರಾದ ಗೌತಮಿ, ರಚನಾ, ಮಹಾಲಕ್ಷ್ಮಿ ಮತ್ತು ಶ್ರೀಶ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರ ತಂಡವು ಕಡಲ ತೀರದಲ್ಲಿ ಜಮೆಗೊಂಡ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಮತ್ತು ಕಸವನ್ನು ತೆರವುಗೊಳಿಸಿತು. ಸಮುದ್ರ ತೀರದ ಸೌಂದರ್ಯವನ್ನು ಹೆಚ್ಚಿಸುವ ಜತೆಗೆ ಜನ ಜಾಗೃತಿ ಮೂಡಿಸಲಾಯಿತು.

ಇನ್ನೊಂದು ತಂಡದಲ್ಲಿ ಹಿರಿಯ ಸ್ವಯಂ ಸೇವಕರಾದ ಉದಯ ಕೆ.ಪಿ., ತಾರಾನಾಥ್ ಆಳ್ವ, ಶ್ರೀಧರ್, ರಾಜೀವಿ ಚಂದ್ರಶೇಖರ್, ಪ್ರಕಾಶ್ ಮತ್ತು ಬಬಿತಾ ಶೆಟ್ಟಿ ಅವರು ಮತ್ತೊಂದು ವಿದ್ಯಾರ್ಥಿ ತಂಡದೊಂದಿಗೆ ಸೇರಿಕೊಂಡು ಸಮುದ್ರ ತೀರಕ್ಕೆ ಬಂದು ಸೇರಿದ್ದ ಥರ್ಮೋಕೋಲ್, ಮರದ ತ್ಯಾಜ್ಯ, ಪ್ಲಾಸ್ಟಿಕ್, ಚಪ್ಪಲಿ, ಬಾಟಲಿಗಳು ಮತ್ತು ಕಸದ ರಾಶಿಗಳನ್ನು ತೆರವುಗೊಳಿಸಿದರು.

ಎಂಆರ್‌ಪಿಎಲ್– ಒಎನ್‌ಜಿಸಿ ಪರಿಸರ ಸಾಮಾಜಿಕ ಹೊಣೆಗಾರಿಕೆ ಯೋಜನೆ

ಬಂಟ್ವಾಳ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿ ಬೀಚ್ ಕ್ಲೀನಿಂಗ್ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಚಿನ್ ಶೆಟ್ಟಿ, ನವನೀತ್, ವರುಣ್, ರಾಘವೇಂದ್ರ ಮತ್ತು ಹರ್ಷ ಕಾರ್ಯಕ್ರಮವನ್ನು ಸಮನ್ವಯಗೊಳಿಸಿ, ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತವಾಗಿ ವರ್ಗೀಕರಿಸಿ ಸಾಗಾಟದ ಕಾರ್ಯ ನಿರ್ವಹಿಸಿದರು. ರಿಪರ್ಪಸ್ ಗ್ಲೋಬಲ್ ಮತ್ತು ಸತ್ತ್ವ ನಾಲೆಜ್ ರಿಯಾಲಿಟಿ ಟ್ರಸ್ಟ್ ಪ್ರತಿನಿಧಿಗಳೂ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಅಭಿಯಾನವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನ ಸಹಯೋಗದೊಂದಿಗೆ ಎಂಆರ್‌ಪಿಎಲ್– ಒಎನ್‌ಜಿಸಿ ಪರಿಸರ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ನಡೆಯಿತು.

--------