ಆರೋಪಿಗಳಲ್ಲಿ ಒಬ್ಬ ಮಹಿಳೆಯನ್ನು ಹೋಟೆಲ್‌ಗೆ ಕರೆದೊಯ್ದು ನಂತರ ತನ್ನ ಸ್ನೇಹಿತನಿಗೆ ವೀಡಿಯೊ ಕರೆ ಮಾಡಿ ಅತ್ಯಾಚಾರವನ್ನು ಲೈವ್ ಸ್ಟ್ರೀಮ್‌ ಮಾಡಿದ್ದಾನೆ. ಸ್ನೇಹಿತ ವೀಡಿಯೊ ಕರೆ ಸಮಯದಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಕೃತ್ಯವನ್ನು ರೆಕಾರ್ಡ್ ಮಾಡಿ ದುಷ್ಕೃತ್ಯ ಮೆರೆದಿದ್ದಾನೆ

ಭೋಪಾಲ್ (ಜೂ. 11): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ 18 ವರ್ಷದ ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಲಾಗಿದ್ದು, ಆರೋಪಿಗಳಲ್ಲಿ ಒಬ್ಬಾತ ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್‌ ಮೂಲಕ ಲೈಂಗಿಕ ಕಿರುಕುಳವನ್ನು 'ಲೈವ್-ಸ್ಟ್ರೀಮ್' ಮಾಡಿದ್ದಾನೆ. ನಂತರ ಆಕೆಯನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಯುವಕರು ಕೃತ್ಯವನ್ನು ರೆಕಾರ್ಡ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಯುವತಿ ಕಳೆದ ವರ್ಷ ಶಾಲೆಯಲ್ಲಿ ಓದುತ್ತಿದ್ದಾಗ ಜೂನ್‌ನಲ್ಲಿ ಈ ಘಟನೆ ನಡೆದಿದ್ದರೂ, ಸಾಮಾಜಿಕ ಕಳಂಕಕ್ಕೆ ಹೆದರಿ ಯಾರಿಗೂ ತಿಳಿಸಿದೆ ಸುಮ್ಮನಾಗಿದ್ದಳು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ದೂರಿನ ಆಧಾರದ ಮೇಲೆ, ಪೊಲೀಸರು ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ಅನ್ವಯ 25 ವರ್ಷದ ವಿವೇಕ್ ಯಾದವ್ ಮತ್ತು ಲಾಲು ಸಾಹು- ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಶ್ಚಿತಾರ್ಥ ರದ್ದು: ಇತ್ತೀಚೆಗೆ ಯುವತಿಯ ನಿಶ್ಚಿತಾರ್ಥ ಬಳಿಕ ಆರೋಪಿಯು ಆಕೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ಆಕೆಯ ಗಂಡನ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡ ಬಳಿಕ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ನಿಶ್ಚಿತಾರ್ಥವನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. ನಿಶ್ಚಿತಾರ್ಥವನ್ನು ರದ್ದುಗೊಳಿಸಿದ ನಂತರ ತಮ್ಮ ಮಗಳೊಂದಿಗೆ ನಡೆದ ಘಟನೆಯ ಬಗ್ಗೆ ತಿಳಿದು ದುಃಖಿತರಾದ ಆಕೆಯ ಪೋಷಕರು ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ವರದಿ ತಿಳಿಸಿದೆ. 

ಇದನ್ನೂ ಓದಿ:ನಿರ್ಮಾಣ ಹಂತದಲ್ಲಿದ್ದ ಪೊಲೀಸ್ ಕಂಟ್ರೋಲ್ ಕೇಂದ್ರದಲ್ಲೇ ಕಳ್ಳತನ: ದೂರು ದಾಖಲು

ಆರೋಪಿಯು ಆರಂಭದಲ್ಲಿ ಬಾಲಕಿಯ ಜೊತೆ ಸ್ನೇಹ ಬೆಳೆಸಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ತಮ್ಮ ಬೇಡಿಕೆಯನ್ನು ಪೂರೈಸಲು ನಿರಾಕರಿಸಿದರೆ ಆಕೆಯ ಸಹೋದರ ಮತ್ತು ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. 

ಬಳಿಕ ಆರೋಪಿ ಲಾಲು ಆಕೆಯನ್ನು ಹೋಟೆಲ್‌ಗೆ ಕರೆದೊಯ್ದಿದ್ದ. ನಂತರ ಅವನು ತನ್ನ ಸ್ನೇಹಿತ ವಿವೇಕ್‌ಗೆ ವೀಡಿಯೊ ಕರೆ ಮಾಡಿ ಅತ್ಯಾಚಾರವನ್ನು ಲೈವ್ ಆಗಿ ವೀಕ್ಷಿಸುವಂತೆ ಮಾಡಿದ್ದ. ವಿವೇಕ್ ವೀಡಿಯೊ ಕರೆಯಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಕೃತ್ಯವನ್ನು ರೆಕಾರ್ಡ್ ಮಾಡಿ ದುಷ್ಕೃತ್ಯ ಮೆರೆದಿದ್ದ. ಲಾಲು ತನ್ನ ಸ್ನೇಹಿತ ವಿವೇಕ್‌ಗೆ ವಿಡಿಯೋ ಕಾಲ್‌ನಲ್ಲಿ ಕೃತ್ಯವನ್ನು ಲೈವ್ ಆಗಿ ತೋರಿಸಿದ್ದಾನೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ತಿಳಿಸಿದೆ. 

ನಂತರ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದಾಗ ಆಕೆ ಝಾನ್ಸಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಅವರ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದಾಳೆ. ಆದರೆ, ಆ ಸಮಯದಲ್ಲಿ ಯುವತಿ ಅತ್ಯಾಚಾರದ ಪ್ರಸ್ತಾಪ ಮಾಡಿರಲಿಲ್ಲ. ಆದರೆ ಇತ್ತೀಚೆಗೆ, ನಿಶ್ಚಿತಾರ್ಥ ರದ್ದುಗೊಂಡ ಬಳಿಕ, ಅವಳು ಅನುಭವಿಸಿದ ಅಗ್ನಿಪರೀಕ್ಷೆಯನ್ನು ತನ್ನ ಹೆತ್ತವರಿಗೆ ಬಹಿರಂಗಪಡಿಸಿದ್ದಾಳೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. .

ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ