Mandya Crime: ಹಳೆ ದ್ವೇಷ, ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಚ್ ಸಮೀಪದ ಸರೋವರ ಡಾಬಾ ಬಳಿ ನಡೆದ ಘಟನೆ
ಪಾಂಡವಪುರ(ಅ.01): ಹಳೆ ವೈಷ್ಯಮ್ಯದಿಂದಾಗಿ ಯುವಕರ ಗುಂಪು ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತಾಲೂಕಿನ ನೀಲನಹಳ್ಳಿ ಗೇಚ್ ಸಮೀಪದ ಸರೋವರ ಡಾಬಾ ಬಳಿ ಗುರುವಾರ ರಾತ್ರಿ ನಡೆದಿದೆ. ತಾಲೂಕಿನ ಲಕ್ಷ್ಮೇಸಾಗರದ ನಿವಾಸಿ ಎಲ್.ಸಿ.ಸ್ವಾಮಿ ಪುತ್ರ ಧನಂಜಯ ಅಲಿಯಾಸ್ ಧನು(22) ಮೃತ ಯುವಕ. ಅದೇ ಗ್ರಾಮದ ರೋಹಿತ್, ದರ್ಶನ್, ಸುನೀಲ್, ರಾಘು, ರಮೇಶ್ ಹತ್ಯೆಗೈದಿರುವ ಆರೋಪಿಗಳು.
ಕಳೆದ ಒಂದು ವರ್ಷದ ಹಿಂದೆ ಕ್ಷುಲಕ್ಕೆ ವಿಚಾರಕ್ಕೆ ಧನಂಜಯ(ಧನು) ಹಾಗೂ ರೋಹಿತ್ ನಡುವೆ ಜಗಳ ಉಂಟಾಗಿತ್ತು. ಈ ವೇಳೆ ಧನಂಜಯ ಕೊಲೆ ಆರೋಪಿ ರೋಹಿತನ ಸೋದರ ಮಾವನ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಪ್ರಯತ್ನದ(307) ಪ್ರಕರಣದಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ. ಇದನ್ನೇ ಮನಸ್ಸಿನಲಿಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದ ರೋಹಿತ್ ಆಗಾಗ್ಗೆ ಧನಂಜಯ ಜತೆ ಜಗಳವಾಡಿ ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಸಮಯ ಸಾಧಿಸಿ ಸ್ನೇಹಿತರೊಂದಿಗೆ ಕೊಲೆ ಮಾಡಿರುವುದಾಗಿ ಮೃತನ ತಂದೆ ನೀಡಿರುವ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Crime News: ತಂಬಾಕು ತರಲು ನಿರಾಕರಿಸಿದ 8 ವರ್ಷದ ಮೊಮ್ಮಗಳನ್ನು ಕೊಂದ ಅಜ್ಜ
ಮೃತ ಧನಂಜಯ ಗುರುವಾರ ರಾತ್ರಿ 10.15 ರ ಸಮಯದಲ್ಲಿ ನೀಲನಹಳ್ಳಿ ಗೇಟ್ ಸಮೀಪದ ಸರೋವರ ಹೊಟೇಲ್ನಲ್ಲಿ ತನ್ನ ಸ್ನೇಹಿತರೊಂದಿಗೆ ಊಟ ಮುಗಿಸಿಕೊಂಡು ಹೊರಬರುವುದನ್ನೇ ಕಾಯುತ್ತಿದ್ದ ಆರೋಪಿಗಳು ಹೊಟೇಲ್ ಹಿಂಬದಿಗೆ ಯುವಕನನ್ನು ಎಳೆದುಕೊಂಡು ಮಾರಾಕಾಸ್ತ್ರಗಳಿಂದ ಎದೆ, ಕಾಲು, ಭುಜದ ಭಾಗಗಳಿಗೆ ಹಲ್ಲೆ ನಡೆಸಿ ಬಳಿಕ ಕತ್ತು ಸೀಳಿದ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕನನ್ನು ತಕ್ಷಣ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸುವಾಗ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.
ಪಟ್ಟಣದ ಉಪವಿಭಾಗೀಯ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಒಪ್ಪಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.