ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದ ಜನತೆ ಮತ ಹಾಕಿಲ್ಲ ಎಂದು ಕೇಂದ್ರದಿಂದ ರೈತರಿಗೆ ಬರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ(ಮೇ.02): ಪ್ರಧಾನಿ ಮೋದಿ ಅವರು ಅಚ್ಚೇ ದಿನ ಬರುತ್ತದೆ. ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯ ನಾಗರಿಕನ ಬ್ಯಾಂಕ್ ಖಾತೆ ₹15 ಲಕ್ಷ ಜಮಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾರೊಬ್ಬರ ಖಾತೆಗೂ ನಯಾಪೈಸೆ ಹಾಕದೇ ಸುಳ್ಳು ಹೇಳಿ ಮತ ಪಡೆದು ಪ್ರಧಾನಿ ಆಗಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ತಾಲೂಕಿನ ರೋಡಗಿ, ಸಾತಲಗಾಂವ್, ನಾದ ಕೆ.ಡಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಪರ ಮತಯಾಚನೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ರಾಜ್ಯ ಬಸವಣ್ಣನವರು ಹುಟ್ಟಿದ ನಾಡು. ಶಾಂತಿ, ಪ್ರೀತಿ, ಹೃದಯ ಶ್ರೀಮಂತಿಕೆ ಈ ಭೂಮಿಯ ಗುಣಧರ್ಮ. ಹೀಗಾಗಿ ಕಾಂಗ್ರೆಸ್ ಸರ್ವ ಸಮುದಾಯ, ಬಡವ ಬಲ್ಲಿದ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾ ಅವರನ್ನು ಗೌರವಿಸುವ ಏಕೈಕ ಪಕ್ಷ ಕಾಂಗ್ರೆಸ್‌. ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯದ ಜನತೆ ಮತ ಹಾಕಿಲ್ಲ ಎಂದು ಕೇಂದ್ರದಿಂದ ರೈತರಿಗೆ ಬರ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಸೋಲಬೇಕು: ಸಚಿವ ರಾಮಲಿಂಗಾರೆಡ್ಡಿ

ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ, ಬೆಲೆಗಳ ಹೆಚ್ಚಳ, ರೈತರು ಬೆಳೆದ ಧವಸ, ಧಾನ್ಯಗಳಿಗೆ ಬೆಂಬಲ ಬೆಲೆ ಇಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ನಿಮ್ಮ ಮತ ಹಾಕಿ ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಬದಲಾವಣೆ ಪರ್ವ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಸೋಮು ಮ್ಯಾಕೇರಿ, ಸಿದ್ದರಾಯ ಐರೋಡಗಿ ಮಾತನಾಡಿದರು. ಸಿದ್ದರಾಯ ಐರೋಡಗಿ, ದಿಲೀಪ ಬಾಸಗಿ, ಸೋಮು ಮ್ಯಾಕೇರಿ, ಬಸವರಾಜ ಅವಜಿ, ವಿ.ಕೆ ಅಂಬಾರಿ, ಚಂದುಸಾಹುಕಾರ ಸೊನ್ನ, ಮಂಜು ಶಹಾಬಾದಿ, ಪ್ರಶಾಂತ ಆಲಗೊಂಡ, ಗೌಡಪ್ಪಗೌಡ ಪಾಟೀಲ, ಮಂಜು ಕಾಮಗೊಂಡ, ಪ್ರಭು ಮುಲಗಿ, ಸಂತೋಷ ಜಂಗಮಶೆಟ್ಟಿ, ಶಾಂತು ಲಿಂಗದಳ್ಳಿ, ದಸ್ತಗೀರ ಸಂಜವಾಡ, ಸಂತೋಷ ಜಂಗಮಶೆಟ್ಟಿ, ಸಂಗಣ್ಣಾ ಈರಾಬಟ್ಟಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಭೀಮಣ್ಣಾ ಕೌಲಗಿ, ಇಲಿಯಾಸ ಬೋರಾಮಣಿ, ಮಹಿಬೂಬ ಅರಬ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.