ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಸಹೋದರನನ್ನು ವಿಚಾರಣೆ ನಡೆಸಲಾಗುತ್ತಿದೆ. ಸಿಬಿಐ ವಿಚಾರಣೆ ಎದುರಿಸಿದ್ದಾರೆ.

ಬೆಂಗಳೂರು (ಸೆ.15): ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಗೌಡರ ಅವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮತ್ತು ಅವರ ಸಹೋದರ ವಿಜಯ್‌ ಕುಲಕರ್ಣಿ ಅವರು ಸಿಬಿಐ ವಿಚಾರಣೆಯನ್ನು ಎದುರಿಸಿದರು.

Add Asianetnews Kannada as a Preferred SourcegooglePreferred

ಸೋಮವಾರ ನಗರದ ಸಿಬಿಐ ಕಚೇರಿಗೆ ಆಗಮಿಸಿದ ವಿನಯ್‌ ಕುಲಕರ್ಣಿ ಮತ್ತು ವಿಜಯ್‌ ಕುಲಕರ್ಣಿ ಅವರನ್ನು ಸಂಜೆವರೆಗೆ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಯೋಗೇಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣ ಸಂಬಂಧ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ನೀಡಿರುವ ಹೇಳಿಕೆಗಳನ್ನು ಆಧರಿಸಿ ಇತರೆ ರಾಜಕಾರಣಿಗಳಿಗೂ ನೊಟೀಸ್‌ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾಸ್ಕರ್ ರಾವ್ ಜತೆ ಡ್ರಗ್ಸ್ ಪ್ರಕರಣದ ಆರೋಪಿ ರಾಹುಲ್! ...

ಪ್ರಕರಣದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೆಲವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆರೋಪಿಗಳು ನೀಡಿರುವ ಹೆಸರುಗಳ ಆಧಾರ ಮೇಲೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿಯೂ ಯೋಗೇಶ್‌ ಗೌಡ ಹತ್ಯೆಯು ರಾಜಕೀಯ ವಿಚಾರಕ್ಕೆ ನಡೆದ ಸುಪಾರಿ ಹತ್ಯೆ ಎಂದು ಹೇಳಲಾಗಿತ್ತು. ಹೀಗಾಗಿ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎನ್ನಲಾಗಿದೆ.