ಯಾದಗಿರಿಯ ರಾಜೀವಗಾಂಧಿ ನಗರದಲ್ಲಿ, ಮದ್ಯಪಾನ ಮಾಡುವುದನ್ನು ವಿರೋಧಿಸಿದ್ದಕ್ಕೆ ತಾಯಿಯೊಬ್ಬಳು ತನ್ನ 11 ವರ್ಷದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಮಗಳ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದು, ಪೊಲೀಸ್ ತನಿಖೆಯ ವೇಳೆ ಕೊಲೆ ರಹಸ್ಯ ಬಯಲಾಗಿದೆ.
ಯಾದಗಿರಿ (ಫೆ.11): ಸಾರಾಯಿ ಕುಡಿಯುವುದನ್ನು ಮಗಳು ಆಕ್ಷೇಪಿಸಿದ್ದಕ್ಕೆ ಹೆತ್ತ ತಾಯಿಯೇ ತನ್ನ ಮಗಳ ಕತ್ತು ಹಿಸುಕಿ ಕೊಲೆ ಮಾಡಿರುವ ರಾಕ್ಷಸಿ ಕೃತ್ಯ ಇಲ್ಲಿನ ರಾಜೀವಗಾಂಧಿ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿ. ಆಕೆಯ ತಾಯಿ ನಿರ್ಮಲಾ ಕೊಲೆ ಆರೋಪಿ.
ಮದ್ಯ ಸೇವಿಸುವ ಅಭ್ಯಾಸವಿದ್ದ ನಿರ್ಮಲಾ ಸೋಮವಾರ ಮಧ್ಯಾಹ್ನ ಮನೆಗೆ ಕುಡಿದು ಬಂದಿದ್ದಾಳೆ. ಕುಡಿದು ಬಂದಿದ್ದಕ್ಕೆ ಪ್ರತಿಭಾ ಆಕ್ಷೇಪಿಸಿದ್ದಾಳೆ. ಆಗ ತಾಯಿ ಮಗಳ ನಡುವೆ ವಿಪರೀತ ಜಗಳ ನಡೆದಿದ್ದು ಮೊದಲೇ ಪಾನಮತ್ತಳಾಗಿದ್ದ ನಿರ್ಮಲಾ ಆಕ್ರೋಶಗೊಂಡು, ಮಗಳನ್ನು ಕತ್ತು ಹಿಸುಕಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾಳೆಂದು ದೂರಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ SSLC ಓದುವ ಮಗಳ ಬ್ಯಾಗ್, ಪುಸ್ತಕ ಸುಟ್ಟ ತಂದೆ, ವಿದ್ಯಾರ್ಥಿನಿಗೆ ಆಸರೆಯಾದ ಖಾಕಿ ಪಡೆ!
ಮಗಳನ್ನು ಕೊಲೆ ಮಾಡಿದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ನಿರ್ಮಲಾ ಯತ್ನಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ಬಾಲಕಿ ಕುತ್ತಿಗೆಯಲ್ಲಿ ಬೆರಳಿನ ಗುರುತು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ನಾಲ್ವರು ಹೆಣ್ಣು ಮಕ್ಕಳನ್ನು ಹೆತ್ತಿದ್ದ ನಿರ್ಮಲಾಗೆ ಪತಿ ಇರಲಿಲ್ಲ ಎನ್ನಲಾಗಿದೆ.



