ಯಾದಗಿರಿ ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಜಾಲವನ್ನು ಭೇದಿಸಿದ್ದು, ಹುಣಸಗಿ ಮೂಲದ ಮಾನಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ಶೋರೂಮ್ ಹೆಸರಲ್ಲಿ ಕದ್ದ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದು, ಈತನಿಂದ 57 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯಾದಗಿರಿ (ಜ.25): ಯಾದಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರರಾಜ್ಯ ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಕಿ ಪಡೆ ಭರ್ಜರಿ ಕಾರ್ಯಾಚರಣೆ: ಕುಖ್ಯಾತ ಕಳ್ಳ ಅರೆಸ್ಟ್
ಯಾದಗಿರಿ ಜಿಲ್ಲೆಯ ಹುಣಸಗಿ ಮೂಲದ ಮಾನಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಈ ಅಂತರರಾಜ್ಯ ಕಳ್ಳ ಬಲೆಗೆ ಬಿದ್ದಿದ್ದಾನೆ. ಈತನಿಂದ ಬರೋಬ್ಬರಿ 57 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಳ್ಳತನದ ದೊಡ್ಡ ಜಾಲ ಬಯಲಾಗಿದೆ.

ಮೂರು ರಾಜ್ಯಗಳಲ್ಲಿ ಕೈಚಳಕ: ಹಳೆಯ ಬೈಕ್ಗಳೇ ಟಾರ್ಗೆಟ್
ಬಂಧಿತ ಮಾನಪ್ಪ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ತನ್ನ ಕೈಚಳಕ ತೋರಿಸುತ್ತಿದ್ದ. ಪ್ರಮುಖವಾಗಿ ಹೀರೋ ಮತ್ತು ಹೊಂಡಾ ಕಂಪನಿಯ ಹಳೆಯ ಬೈಕ್ಗಳನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಕಳ್ಳತನ ಮಾಡುತ್ತಿತ್ತು. ಮಾನಪ್ಪ ಸೇರಿದಂತೆ ಒಟ್ಟು ಆರು ಜನರ ತಂಡ ಈ ಕೃತ್ಯದಲ್ಲಿ ತೊಡಗಿತ್ತು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಶೋರೂಮ್ ಹೆಸರಲ್ಲಿ ನಕಲಿ ದಂಧೆ: 20 ಸಾವಿರಕ್ಕೆ ಮಾರಾಟ
ಬಂಧಿತ ಆರೋಪಿ ಮಾನಪ್ಪ ಸುರಪುರದ ಬಡಾವಣೆಯೊಂದರಲ್ಲಿ 'ಸೆಕೆಂಡ್ ಹ್ಯಾಂಡ್ ಬೈಕ್ ಶೋರೂಮ್' ನಡೆಸುತ್ತಿದ್ದ. ಹೊರರಾಜ್ಯಗಳಿಂದ ಕಳ್ಳತನ ಮಾಡಿ ತಂದ ಬೈಕ್ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗಳಿಗೆ ಇಲ್ಲಿ ಮಾರಾಟ ಮಾಡುತ್ತಿದ್ದ. ಶೋರೂಮ್ ಮಾದರಿಯಲ್ಲೇ ವ್ಯವಹಾರ ಮಾಡುತ್ತಿದ್ದುದರಿಂದ ಸಾರ್ವಜನಿಕರಿಗೆ ಇದು ಕಳ್ಳತನದ ಬೈಕ್ ಎಂಬ ಸಂಶಯವೇ ಬರುತ್ತಿರಲಿಲ್ಲ.

ಕಳ್ಳತನದ ಹಣದಲ್ಲಿ ಜೂಜಾಟದ ಮೋಜು
ಬೈಕ್ ಮಾರಾಟ ಮಾಡಿ ಬಂದ ಹಣವನ್ನು ಈತ ಅಡ್ಡಹಾದಿಗೆ ಬಳಸುತ್ತಿದ್ದ ಎನ್ನಲಾಗಿದೆ. ಕಳ್ಳತನದ ಹಣದಿಂದಲೇ ಇಸ್ಪೀಟು ಮತ್ತು ಮಟ್ಕಾ ಅಂತಹ ಜೂಜಾಟಗಳಲ್ಲಿ ತೊಡಗಿಸಿಕೊಂಡು ಮೋಜು ಮಾಡುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸದ್ಯ ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಉಳಿದ ಐವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


