*  ಕೊಪ್ಪಳದ ಮರ್ಲಾನಹಳ್ಳಿಯಲ್ಲಿ ನಡೆದ ಘಟನೆ*  ದೂರವಾಣಿಯಲ್ಲಿ ಚುಚ್ಚು ಮಾತುಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದ ಪತಿ*  ಪೊಲೀಸರಿಗೆ ದೂರು ನೀಡಿದ ಮೃತರ ತಂದೆ ಅಮೃತ್‌ ಸಿಂಗ್‌  

ಕಾರಟಗಿ(ಮೇ.31): ಪತಿಯ ನಿರಂತರ ಚುಚ್ಚು ಮಾತುಗಳು, ಮಾನಸಿಕ ಹಿಂಸೆ ತಾಳದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಮರ್ಲಾನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಘಟನೆ ಕುರಿತು ಮೃತ ಗೃಹಿಣಿಯ ತಂದೆ ಅನುಮಾನ ವ್ಯಕ್ತಪಡಿಸಿ ತಮ್ಮ ಪುತ್ರಿಗೆ ಆಕೆಯ ಗಂಡ ಕಿರುಕುಳ ನೀಡಿದ್ದು, ಸಾವು ಅನುಮಾನಸ್ಪದವಾಗಿದೆ ಎಂದು ಇಲ್ಲಿನ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

ಮರ್ಲಾನಹಳ್ಳಿ ಗ್ರಾಮದ ರಾಘವೇಂದ್ರ ಸಿಂಗ್‌ ರಜಪೂತ ಅವರ ಪತ್ನಿ ಗಾಯಿತ್ರಿಬಾಯಿ ಮೃತಪಟ್ಟವರು. ಮೇ 21ರಂದು ಪತಿಯ ಒಪ್ಪಿಗೆ ಪಡೆದು ಲಿಂಗಸ್ಗೂರುಗೆ ವಿವಾಹಕ್ಕೆ ಬಂದಿದ್ದರೂ ಪತಿ ದೂರವಾಣಿಯಲ್ಲಿ ಚುಚ್ಚು ಮಾತುಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದನು. ಮೇ 28ರಂದು ಗಂಡನ ಮನೆಗೆ ತೆರಳಿದ್ದ ಗಾಯಿತ್ರಿಬಾಯಿ, ಮೇ 30ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ದೂರವಾಣಿಯಲ್ಲಿ ತಿಳಿಸಿದರು. ಖುದ್ದಾಗಿ ತೆರಳಿದಾಗ ನೇಣು ಹಾಕಿಕೊಂಡು ಯಾವುದೇ ಸಾಕ್ಷ್ಯಗಳಿಲ್ಲ. ಮಗಳ ಈ ಸಾವಿನ ಬಗ್ಗೆ ಸಂಶಯವಿದ್ದು, ತನಿಖೆ ನಡೆಸಬೇಕು ಎಂದು ಮೃತರ ತಂದೆ ಅಮೃತ್‌ ಸಿಂಗ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ತಮ್ಮ ಪುತ್ರಿಯನ್ನು ಮರ್ಲಾನಹಳ್ಳಿಯ ರಾಘವೇಂದ್ರಸಿಂಗ್‌ಗೆ 8 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದದಂದಿನಿಂದಲೂ ಪತಿ, ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ತಂದೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಬ್‌ ಇನ್‌ಸ್ಪೆಕ್ಟರ್‌ ತಾರಾಬಾಯಿ ತನಿಖೆ ಕೈಗೊಂಡಿದ್ದಾರೆ.