ಚಿಕ್ಕಮಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆಗೆ ನುಗ್ಗಿದ ಇಬ್ಬರು ಮಂಗಳಮುಖಿಯರು, ₹10,000 ಹಣಕ್ಕಾಗಿ ಬೇಡಿಕೆಯಿಟ್ಟು ರಂಪಾಟ ನಡೆಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ, ಅವರು ವಧು-ವರರ ಕುಟುಂಬಸ್ಥರನ್ನು ನಿಂದಿಸಿ, ಬೆದರಿಕೆ ಹಾಕಿ ಸಂಭ್ರಮದ ವಾತಾವರಣವನ್ನು ಹಾಳುಮಾಡಿದ್ದಾರೆ. 

ಚಿಕ್ಕಮಗಳೂರು (ಫೆ.12): ನಗರದ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಂಗಳಮುಖಿಯರು ₹10 ಸಾವಿರಕ್ಕೆ ಬೇಡಿಕೆ ಇಟ್ಟು ರಂಪಾಟ ನಡೆಸಿದ ಘಟನೆ ಬುಧವಾರ ನಡೆದಿದೆ. ಚಿಕ್ಕಮಗಳೂರಿನ ರಂಗಣ್ಣನ ಛತ್ರದಲ್ಲಿ ಬುಧವಾರ ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಹಸೆಮಣೆ ಏರಿದ್ದ ವಧು-ವರರಿಗೆ ಅತಿಥಿಗಳು ಶುಭ ಹಾರೈಸುತ್ತಿದ್ದಾಗ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಬಂದಿದ್ದಾರೆ.

 ಸಂಪ್ರದಾಯದಂತೆ ಮದುವೆ ಮನೆಯವರು ₹500 ನೀಡಲು ಹೋದಾಗ ನಿರಾಕರಿಸಿದ ಮಂಗಳಮುಖಿಯರು, ಅಸಭ್ಯವಾಗಿ ವರ್ತಿಸಿ,‘ದೊಡ್ಡದಾಗಿ ಮದುವೆ ಮಾಡ್ಕೋತೀರಿ, ₹10000 ಕೊಡೋ ಯೋಗ್ಯತೆ ಇಲ್ವಾ?’ ಎಂದು ಮನೆಯವರನ್ನು ನಿಂದಿಸಿದ್ದಾರೆ. ಈ ಅಸಭ್ಯ ವರ್ತನೆಯನ್ನು ಕೆಲವರು ಪ್ರಶ್ನಿಸಿದಾಗ ‘ಧಮ್ಮಿದ್ದರೆ ಹೊರಗೆ ಬಾ, ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಬರೋಬ್ಬರಿ ₹10 ಸಾವಿರ ನೀಡಲೇಬೇಕು ಎಂದು ಪಟ್ಟು ಹಿಡಿದರು.

ಅಷ್ಟು ದೊಡ್ಡ ಮೊತ್ತ ನೀಡಲು ನಿರಾಕರಿಸಿದಾಗ, ಮಂಗಳಮುಖಿಯರು ಮಂಟಪದ ಮೇಲೆಯೇ ರಂಪಾಟ ಆರಂಭಿಸಿದ್ದಾರೆ.

ಈ ವೇಳೆ, ಮಂಗಳವಾದ್ಯದ ಸದ್ದಿಗಿಂತ ಮಂಗಳಮುಖಿಯರ ಕಿರುಚಾಟವೇ ಹೆಚ್ಚಾಗಿ ಸಂಭ್ರಮದಿಂದ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ, ಕಿರುಚಾಡುತ್ತಲೇ ಅವರು ಅಲ್ಲಿಂದ ಹೊರಟು ಹೋಗಿದ್ದಾರೆ.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

YouTube video player