Asianet Suvarna News Asianet Suvarna News

ಅಂಬ್ಯುಲೆನ್ಸ್‌ ನಿರಾಕರಿಸಿದ ಆಸ್ಪತ್ರೆ, ತಂಗಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿದ ಅಣ್ಣ!

ಪರೀಕ್ಷೆಯಲ್ಲಿ ಫೇಲ್‌ ಆಗುವ ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ತಂಗಿಯನ್ನು ಅಣ್ಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದ. ಆದರೆ, ವೈದ್ಯರ ಪ್ರಯತ್ನ ಫಲಕಾರಿಯಾಗದೆ ಆಕೆ ಸಾವು ಕಂಡಿದ್ದಳು. ಆ ಬಳಿಕ ಆಸ್ಪತ್ರೆ ಅಂಬ್ಯುಲೆನ್ಸ್‌ ನೀಡಲು ನಿರಾಕರಿಸಿದ್ದರಿಂದ ತಂಗಿಯ ಶವವನ್ನು ಅಣ್ಣ ಬೈಕ್‌ನಲ್ಲಿ ಸಾಗಿಸಿದ ದಾರುಣ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.

Uttar Pradesh Brother took sister dead body by bike in Kaushambi san
Author
First Published Mar 17, 2023, 7:49 PM IST

ನವದೆಹಲಿ (ಮಾ.17): ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಮಾನವೀಯತೆ ತಲೆತಗ್ಗಿಸುವಂಥ ಘಟನೆ ನಡೆದಿದೆ. ಆಸ್ಪತ್ರೆ ಅಂಬ್ಯುಲೆನ್ಸ್‌ ನಿರಾಕರಿಸಿದ್ದರಿಂದ ಯುವಕನೊಬ್ಬ ತಂಗಿಯ ಮೃತದೇಹವನ್ನು ಹೊತ್ತು 10 ಕಿಲೋಮೀಟರ್ ದೂರ ಪ್ರಯಾಣಿಸಿದ ಅಮಾನವೀಯ ಘಟನೆ ನಡೆದಿದೆ. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿನಿಗೆ ಫೇಲ್‌ ಆಗುವ ಭಯ ಕಾಡಿತ್ತು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ತಿಳಿದ ತಕ್ಷಣ ಸಂಬಂಧಿಕರು ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಅಂಬ್ಯಲೆನ್ಸ್‌ ಸಿಗದ ಕಾರಣಕ್ಕೆ ಆಕೆಯ ಸಹೋದರ ಬೈಕ್‌ನಲ್ಲಿ ಮತ್ತಿಬ್ಬರ ಸಹಾಯದಿಂದ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಪ್ರಕರಣವು ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರವಾರಿ ಪುರಸಭೆಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಇಲ್ಲಿ ವಾಸಿಸುತ್ತಿದ್ದ 17 ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎನ್ನುವ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದಳು. ಇದರಿಂದ ಗುರುವಾರ ವಿದ್ಯಾರ್ಥಿನಿ ತನ್ನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾಳೆ. ಈ ವಿಷಯ ತಿಳಿದ ತಕ್ಷಣ ಸಂಬಂಧಿಕರು ಬಾಲಕಿಯನ್ನು ಮಂಜನ್‌ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಈಕೆ ಸಾವು ಕಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.

ನೀರಿನ ಡ್ರಮ್‌ನಲ್ಲಿ ಮಹಿಳೆ ಡೆಡ್ ಬಾಡಿ, ಕಲಾಸಿಪಾಳ್ಯದ ಗಲ್ಲಿಯಲ್ಲಿ ಡೆಡ್ಲಿ ಮರ್ಡರ್..!

ಇದಾದ ನಂತರ ಮೃತರ ಸಹೋದರ ಮೃತದೇಹವನ್ನು ತೆಗೆದುಕೊಂಡು ಹೋಗಲು ಆಸ್ಪತ್ರೆಯ ಆಡಳಿತ ಮಂಡಳಿಗೆ ಅಂಬ್ಯುಲೆನ್ಸ್‌ ನೀಡುವಂತೆ ಕೇಳಿದ್ದರು. ಅರ್ಧ ಗಂಟೆ ಕಾದರೂ ವಾಹನ ಬಂದಿರಲಿಲ್ಲ. ಇದಾದ ಬಳಿಕ ಮೃತನ ಸಹೋದರ ಬಲವಂತದ ಮೇರೆಗೆ ಸಹೋದರಿಯ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾನೆ. ಶವ ತೆಗೆದುಕೊಂಡು ಆಸ್ಪತ್ರೆಯಿಂದ ಹೊರಬರುವಾಗಲೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೃತದೇಹವನ್ನು ಬೈಕ್‌ನಿಂದ ಹೊತ್ತೊಯ್ಯುತ್ತಿರುವಾಗ ಯಾರೋ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಬಳಿಕವೇ ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಯುಟ್ಯೂಬರ್‌ನ ಕಂಬಿ ಹಿಂದೆ ಕಳುಹಿಸಿದ ಹಳೇ ವಿಡಿಯೋ

ಹೋಳಿಗೂ ಮುನ್ನ ಪರೀಕ್ಷೆ ನಡೆದಿತ್ತು. ಆದರೆ, ಫೇಲ್‌ ಆಗುವ ಭಯ ಆಕೆಯಲ್ಲಿತ್ತು ಎಂದು ಮೃತನ ಸಹೋದರ ತಿಳಿಸಿದ್ದಾರೆ. ಇದರಿಂದಾಗಿ ಆಕೆ ಟೆನ್ಶನ್‌ನಲ್ಲಿ ಇದ್ದಳು. ಹಾಗಾಗಿ ಇಂಥ ಕೆಲಸ ಮಾಡಿಕೊಂಡಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವಾದರೂ, ಅಲ್ಲಿ ವೈದ್ಯರು ಈಕೆ ಸಾವು ಕಂಡಿದ್ದಾಗಿ ತಿಳಿಸಿದ್ದರು. ಆಸ್ಪತ್ರೆಯಲ್ಲಿ ವಾಹನಕ್ಕಾಗಿ ಕಾದು ಕಾದು ಸುಸ್ತಾದೆವು. ಬಳಿಕ ಬೈಕ್‌ನಲ್ಲಿ ಮೃತದೇಹವನ್ನು ಸಾಗಿಸಲು ತೀರ್ಮಾನ ಮಾಡಿದೆವು ಎಂದು ಮೃತಳ ಸಹೋದರ ತಿಳಿಸಿದ್ದಾನೆ. ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಿರತು ನ್ಯಾಯವ್ಯಾಪ್ತಿಯ ಅಧಿಕಾರಿ ಕೃಷ್ಣ ಗೋಪಾಲ್ ಸಿಂಗ್ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಬರುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆತ್ಮಹತ್ಯೆಯ ಹಿಂದಿನ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.

Follow Us:
Download App:
  • android
  • ios