ನಟ ಉಪೇಂದ್ರ ಮತ್ತು ಪ್ರಿಯಾಂಕ ಅವರ ಮೊಬೈಲ್ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದಾಶಿವನಗರ ಪೊಲೀಸರು ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ನನ್ನು ಬಂಧಿಸಿದ್ದಾರೆ..
ಬೆಂಗಳೂರು (ನ.12): ಬುದ್ಧಿವಂತ ನಟ ಉಪೇಂದ್ರ ಹಾಗೂ ಪ್ರಿಯಾಂಕ ಮೊಬೈಲ್ ಹ್ಯಾಕ್ ಪ್ರಕರಣದಲ್ಲಿ ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ಹಣವನ್ನು ಖದೀಮರು ದೋಚಿದ್ದರು. ಈ ಸಂಬಂಧ ಸದಾಶಿವನಗರ ಪೊಲೀಸರಿಂದ ಆರೋಪಿ ಬಂಧನ ಮಾಡಲಾಗಿದೆ. ಸೆಪ್ಟೆಂಬರ್15 ರಂದು ಉಪೇಂದ್ರ ದಂಪತಿ ಮೊಬೈಲ್ಅನ್ನು ಸೈಬರ್ ಖದೀಮರು ಹ್ಯಾಕ್ ಮಾಡಿದ್ದರು.
ಆನ್ಲೈನ್ ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್ ಮಾಡಿದ್ದರು. ಈ ವೇಳೆ ಪ್ರಿಯಾಂಕ ಅವರ ಮೊಬೈಲ್ ಗೆ ಲಿಂಕ್ ಬಂದಿತ್ತು. ಓಟಿಪಿ ಹೇಳುವಂತೆ ಖದೀಮರು ಹೇಳಿದ್ದರು. ಆ ಲಿಂಕ್ ಕ್ಲಿಕ್ ಮಾಡಿದ ಬಳಿಕ ಪ್ರಿಯಾಂಕಾ ಉಪೇಂದ್ರ ಅವರ ವಾಟ್ಸಾಪ್ಅನ್ನು ಖದೀಮರು ಹ್ಯಾಕ್ ಮಾಡಿದ್ದರು. ಬಳಿಕ ಪ್ರಿಯಾಂಕಾ ಕಾಂಟ್ಯಾಕ್ಟ್ ನಲ್ಲಿದ್ದವರಿಗೆ 55 ಸಾವಿರ ಹಣ ಕಳಿಸುವಂತೆ ಮೆಸೇಜ್ ಕಳಿಸಲಾಗಿತ್ತು.
ನಂತರ ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್ ನಿಂದ ಕರೆ ಮಾಡಿ ಈ ವಿಚಾರ ತಿಳಿಸಿದ್ದರು. ಈ ವೇಳೆ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಖದೀಮರು ಹ್ಯಾಕ್ ಮಾಡಿದ್ದರು. ಹಣದ ಅಗತ್ಯವಿದೆ ಎಂದು ಪ್ರಿಯಾಂಕ ವಾಟ್ಸಾಪ್ನಿಂದ ಮೆಸೇಜ್ ಕಳಿಸಿದ್ದರು. ಪ್ರಿಯಾಂಕ ಉಪೇಂದ್ರ ಮೆಸೇಜ್ ಮಾಡಿದ್ದಾರೆಂದು ಹಲವರು ಹಣ ಹಾಕಿದ್ದರು. ಪ್ರಿಯಾಂಕ ಉಪೇಂದ್ರರ ಮೆಸೇಜ್ ನೋಡಿ ಕರೆ ಮಾಡಿದವರ ಪೋನ್ ಕಾಲ್ ಕಟ್ ಆಗುತ್ತಿತ್ತು.
ಎಮರ್ಜೆನ್ಸಿ ಇದೆ ಹಣ ಹಾಕುವಂತೆ ವಾಟ್ಸಾಪ್ ಹ್ಯಾಕ್ ಮಾಡಿ ಖದೀಮರು ಸಂದೇಶ ಕಳಿಸಿದ್ದರು. ಕೆಲವು ಮಂದಿ ತುರ್ತಾಗಿ ಏನೋ ಇರಬೇಕೆಂದು 55 ಸಾವಿರ ಹಣ ಕಳಿಸಿದ್ದರು. ಕೂಡಲೇ ಈ ವಿಷಯ ಪ್ರಿಯಾಂಕಗೆ ಗೊತ್ತಾಗಿತ್ತು. ಸ್ವತಃ ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್ ಗೆ ಐವತ್ತು ಸಾವಿರ ಹಣಹಾಕಿದ್ದರು. ಸ್ನೇಹಿತರು ಕರೆ ಮಾಡಿ ವಿಚಾರ ತಿಳಿಸಿದ್ದರು. ಆ ವೇಳೆಗಾಗಲೇ ಒಂದೂವರೆ ಲಕ್ಷ ಹಣವನ್ನು ಅಕೌಂಟ್ಗೆ ಹಾಕಲಾಗಿತ್ತು.
ದೂರು ದಾಖಲಿಸಿದ್ದ ಪ್ರಿಯಾಂಕಾ
ಬಳಿಕ ಈ ವಿಚಾರವಾಗಿ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿತ್ತು. ಕಾರ್ಯ ಪ್ರವೃತ್ತರಾದ ಪೊಲೀಸರು ಸೈಬರ್ ಆರೋಪಿಗಳನ್ನು ಹುಡುಕುತ್ತಾ ಹೋಗಿದ್ದರು. ಆಗ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂಧೆಯಲ್ಲಿ ನಿರತರಾಗಿದ್ದಾರೆ.
ಪೊಲೀಸರಿಗೆ ಶಾಕ್
ಆರೋಪಿಗಳನ್ನು ಬಂಧಿಸಲು ಹೋಗಿದ್ದ ಪೊಲೀಸರೇ ಅಲ್ಲಿನ ವ್ಯವಸ್ಥೆ ಕಂಡು ಶಾಕ್ ಆಗಿದ್ದರು. ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ನಿರತರಾಗಿದ್ದರು. ಕೊನೆಗೆ ಆರೋಪಿ ವಿಕಾಸ್ ಕುಮಾರ್ ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಕಸ್ಟಡಿಗೆ ಪಡೆದು ಆರೋಪಿ ವಿಕಾಸ್ ವಿಚಾರಣೆ ಮಾಡಲಾಗುತ್ತಿದೆ. ಕೇಂದ್ರ ವಿಭಾಗದ ಸೈಬರ್ ಹಾಗೂ ಸದಾಶಿವನಗರ ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿದಿದೆ.
