ಸಂಭಾಲ್‌ನಲ್ಲಿ, ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ, ಪತಿಯನ್ನು ಕೊಂದು, ದೇಹವನ್ನು ವುಡ್‌ ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದಿದ್ದಾಳೆ.

ಸಂಭಾಲ್‌ (ಡಿ.24): ಪತಿಯನ್ನು ಹೊಡೆದು ಕೊಂದಿದ್ದು ಮಾತ್ರವಲ್ಲದೆ, ಮೃತದೇಹವನ್ನು ತುಂಡು ತುಂಡು ಮಾಡಿ ವುಡ್‌ ಗ್ರೈಂಡರ್‌ನಲ್ಲಿ ರುಬ್ಬಿ ಚರಂಡಿಗೆ ಎಸೆದ ಆರೋಪದ ಮೇಲೆ ಆತನ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳನ್ನು ರೂಬಿ ಮತ್ತು ಗೌರವ್ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 20 ರಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಕೆ ಬಿಷ್ಣೋಯ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಚಂದೌಸಿ ಪ್ರದೇಶದ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ನವೆಂಬರ್ 18 ರಂದು ತನ್ನ ಪತಿ ರಾಹುಲ್ (38) ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು.

ಇದಾದ ಸಾಕಷ್ಟು ದಿನಗಳ ನಂತರ ಅಂದರೆ ಡಿಸೆಂಬರ್‌ 15 ರಂದು ಈದ್ಗಾ ಪ್ರದೇಶದ ಬಳಿಯ ಚರಂಡಿಯಿಂದ ಪೊಲೀಸರು ವಿರೂಪಗೊಂಡ ಶವವನ್ನು ವಶಪಡಿಸಿಕೊಂಡಿದ್ದರು. ಆ ಶವದಲ್ಲಿ ತಲೆ, ಕೈಗಳು ಹಾಗೂ ಕಾಲುಗಳು ಇದ್ದಿರಲಿಲ್ಲ. "ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಧಿವಿಜ್ಞಾನ ತಂಡವು ವಿವರವಾದ ಪರೀಕ್ಷೆಯನ್ನು ನಡೆಸಿತು ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಯಿತು" ಎಂದು ಎಸ್‌ಪಿ ಹೇಳಿದರು.

ಮೃತದೇಹದ ಗುರುತು ಪೊಲೀಸರು ಪತ್ತೆ ಮಾಡಿದ್ದು ಹೇಗೆ?

ತನಿಖೆಯ ಸಮಯದಲ್ಲಿ, ಪೊಲೀಸರು ದೇಹದ ಮೇಲೆ "ರಾಹುಲ್" ಎಂಬ ಹೆಸರು ಬರೆಯಲ್ಪಟ್ಟಿರುವುದನ್ನು ಕಂಡುಕೊಂಡರು. ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ವರದಿಗಳನ್ನು ಪರಿಶೀಲಿಸಿದಾಗ ಮತ್ತು ತಾಂತ್ರಿಕ ವಿಶ್ಲೇಷಣೆಯಲ್ಲಿ ರಾಹುಲ್ ಅವರ ಮೊಬೈಲ್ ಫೋನ್ ನವೆಂಬರ್ 18 ರಿಂದ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.

ಹೆಚ್ಚಿನ ತನಿಖೆಯ ನಂತರ ಪೊಲೀಸರು ರೂಬಿಯ ಕೈವಾಡವನ್ನು ಶಂಕೆ ಮಾಡಿದ್ದರು. ವಿಚಾರಣೆಯ ಸಮಯದಲ್ಲಿ, ರೂಬಿ ಹಾಗೂ ಗೌರವ್‌ ನಡುವಿನ ಅಕ್ರಮ ಸಂಬಂಧವನ್ನು ರಾಹುಲ್‌ ರೆಡ್‌ಹ್ಯಾಂಡ್‌ ಆಗಿ ನೋಡಿದದ. ಆ ಬಳಿಕ ತನ್ನ ಪ್ರಿಯಕರ ಗೌರವ್‌ನ ಸಹಾಯದಿಂದ ರಾಹುಲ್‌ನನ್ನು ಕೊಂದಿದ್ದಾಗಿ ರೂಬಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

"ರಾಹುಲ್ ಮೇಲೆ ಕಬ್ಬಿಣದ ರಾಡ್ ಮತ್ತು ಕಬ್ಬಿಣದ ಕುಟ್ಟಾಣಿಯಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಅವರು ಗ್ರೈಂಡರ್ ತಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ" ಎಂದು ಬಿಷ್ಣೋಯ್ ಹೇಳಿದರು. ದೇಹದ ಒಂದು ಭಾಗವನ್ನು ಚರಂಡಿಯಲ್ಲಿ ಎಸೆಯಲಾಗಿದ್ದು, ನಂತರ ಅದನ್ನು ಹೊರತೆಗೆಯಲಾಯಿತು, ಉಳಿದ ಭಾಗಗಳನ್ನು ರಾಜ್‌ಘಾಟ್‌ಗೆ ತೆಗೆದುಕೊಂಡು ಹೋಗಿ ಗಂಗಾ ನದಿಗೆ ಎಸೆಯಲಾಗಿದೆ ಎಂದು ಅವರು ಹೇಳಿದರು.

ಮೃತದೇಹವನ್ನು ಕತ್ತರಿಸಲು ಬಳಸಲಾಗಿದೆ ಎನ್ನಲಾದ ಗ್ರೈಂಡರ್, ದಾಳಿಗೆ ಬಳಸಲಾದ ಕಬ್ಬಿಣದ ಸುತ್ತಿಗೆ ಮತ್ತು ಇತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರ ಡಿಎನ್‌ಎ ಮಾದರಿಗಳನ್ನು ಸಹ ಸಂರಕ್ಷಿಸಲಾಗಿದೆ ಮತ್ತು ಗುರುತನ್ನು ನಿರ್ಣಾಯಕವಾಗಿ ಸ್ಥಾಪಿಸಲು ಮತ್ತು ಪ್ರಕರಣವನ್ನು ಬಲಪಡಿಸಲು ಅವರ ಮಕ್ಕಳ ಡಿಎನ್‌ಎ ಮಾದರಿಗಳೊಂದಿಗೆ ಹೋಲಿಸಲಾಗುವುದು ಎಂದು ಎಸ್‌ಪಿ ಹೇಳಿದರು. ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.