ಅತೀ ವೇಗ ಹಾಗೂ ಅಜಾಕರೂಕತೆಯಿಂದ ಬೈಕ್ ಚಲಾಯಿಸಿ, ತೀವ್ರ ಸ್ವರೂಪದ ಗಾಯಗೊಳಿಸಿದ ವ್ಯಕ್ತಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಉಡುಪಿ (ಫೆ.07): ಅತೀ ವೇಗ ಹಾಗೂ ಅಜಾಕರೂಕತೆಯಿಂದ ಬೈಕ್ ಚಲಾಯಿಸಿ, ತೀವ್ರ ಸ್ವರೂಪದ ಗಾಯಗೊಳಿಸಿದ ವ್ಯಕ್ತಿಗೆ ಹಾಗೂ ಬೈಕ್‌ಗೆ ವಾಯು ಮಾಲಿನ್ಯ ಪತ್ರ ಹೊಂದಿಲ್ಲದ ವ್ಯಕ್ತಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

Add Asianetnews Kannada as a Preferred SourcegooglePreferred

2020 ಅಕ್ಟೋಬರ್ 3 ರಂದು ರಾತ್ರಿ 10.15 ರ ಸುಮಾರಿಗೆ 1ನೇ ಆರೋಪಿಯಾದ ಪ್ರಶಾಂತ್ ಎಂಬಾತನು 2ನೇ ಆರೋಪಿಯಾದ ಶರತ್‌ಗೆ ಸೇರಿದ ಮೋಟಾರ್ ಸೈಕಲ್ ಅನ್ನು ಸಂತೆಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿ ಕಳ್ತೂರು ಗ್ರಾಮದ ಸಂತೆಕಟ್ಟೆಯ ಗಣೇಶ್ ಕಲ್ಯಾಣ ಮಂಟಪದ ಸಮೀಪ ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್‌ನಲ್ಲಿದ್ದ ಹರೀಶ್ ನಾಯ್ಕ್ ಹಾಗೂ ಕೃಷ್ಣಪ್ಪ ವಾಲ್ಮೀಕಿ ಎಂಬವರಿಗೆ ತೀವ್ರ ಸ್ವರೂಪದಲ್ಲಿ ಗಾಯಗಳಾಗಿತ್ತು.

ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್‌ ಅಭಿಪ್ರಾಯ

ಎರಡನೇ ಆರೋಪಿಯು ತನ್ನ ಮೋಟಾರ್ ಸೈಕಲ್‌ಗೆ ವಾಯು ಮಾಲಿನ್ಯ ಪತ್ರ ಹೊಂದಿರುವುದಿಲ್ಲ ಮತ್ತು ವಾಹನ ಚಾಲನಾ ಪರವಾನಿಗೆ ಹೊಂದದೇ ಇರುವ ವ್ಯಕ್ತಿಗೆ ಮೋಟಾರ್ ಸೈಕಲ್ ಅನ್ನು ಚಲಾಯಿಸಲು ನೀಡಿರುವ ಹಿನ್ನೆಲೆ, ಹೆಬ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಅವರು ಆರೋಪಿ ಪ್ರಶಾಂತ್‌ಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ಒಪ್ಪದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ವಿಸ್ತರಣೆ ಮಾಡಬೇಕು. ಜೊತೆಗೆ 2ನೇ ಆರೋಪಿ ಶರತ್ ಎಂಬಾತನಿಗೆ 7000 ರೂ. ದಂಡ ವಿಧಿಸಿ, ದಂಡ ಪಾವತಿಸಲು ಒಪ್ಪದಿದ್ದಲ್ಲಿ 10 ದಿನಗಳ ಸಾದಾ ಶಿಕ್ಷೆ ನೀಡುವಂತೆ ತೀರ್ಪು ನೀಡಿರುತ್ತಾರೆ.

ಕಳ್ಳತನದ ಆರೋಪಿಗೆ ಶಿಕ್ಷೆ- ಉಡುಪಿ (ಫೆ.07): ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2021 ನವೆಂಬರ್ 17 ರಂದು ರಾತ್ರಿ ಸುಖೇಶ್ ನಾಯ್ಕ್ ಎಂಬಾತನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ದುಗ್ಗಣ್ಣ ಬೆಟ್ಟು, ಮಾರ್ಗ ಜುಮಾದಿಕಟ್ಟೆ ದೇವಸ್ಥಾನದ ಹಿಂಬದಿ ರಸ್ತೆಯಲ್ಲಿರುವ ಬಾಬು ಆಚಾರ್ಯ ಅವರ ಮನೆಯ ಬೀಗ ಮುರಿದು, ಒಳಗೆ ಪ್ರವೇಶಿಸಿ, ಕಪಾಟಿನ ಲಾಕರ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

72 ವರ್ಷದ ವೃದ್ಧನಿಗೆ ಕಚ್ಚಿದ ರಾಟ್‌ವಿಲ್ಲರ್: 13 ವರ್ಷದ ನಂತರ ನಾಯಿ ಮಾಲೀಕನಿಗೆ ಜೈಲು

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಅವರು ಆರೋಪಿ ಸುಖೇಶ್ ನಾಯ್ಕ್ ಎಂಬಾತನಿಗೆ ಭಾ.ದಂ.ಸಂ. ಕಲಂ 380 ರಡಿ 5 ವರ್ಷ ಮತ್ತು ಕಲಂ 457 ರಡಿ 5 ವರ್ಷಗಳ ಕಾಲ ಕಠಿಣ ಸಜೆ ಹಾಗೂ 5000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ ವಾದ ಮಂಡಿಸಿರುತ್ತಾರೆ.