ಕರಗ ಪಲ್ಲಕ್ಕಿ ಮೆರವಣಿಗೆ ಮುಗಿಸಿಕೊಂಡು ವಾಪಾಸ್‌ ಹೋಗುವಾಗ ಪಲ್ಲಕ್ಕಿಗೆ ತಂತಿ ಸ್ಪರ್ಶಿಸಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು (ಜೂ.3):  ಕರಗ ಪಲ್ಲಕ್ಕಿ ಮೆರವಣಿಗೆ ಮುಗಿಸಿಕೊಂಡು ವಾಪಾಸ್‌ ಹೋಗುವಾಗ ಪಲ್ಲಕ್ಕಿಗೆ ತಂತಿ ಸ್ಪರ್ಶಿಸಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೀರಸಂದ್ರ ನಿವಾಸಿ ರಂಗನಾಥ್‌ (33) ಮತ್ತು ಜಿಗಣಿಯ ಹರಿಬಾಬು (25) ಮೃತ ದುರ್ದೈವಿಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ರಾತ್ರಿ ಗೊಲ್ಲಹಳ್ಳಿಯಲ್ಲಿ ಕರಗ ಉತ್ಸವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ದೇವರ ಪಲ್ಲಕಿ ಪ್ರತಿಷ್ಠಾಪಿಸಿ ಇಡೀ ರಾತ್ರಿ ಗೊಲ್ಲಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡಲಾಗಿದೆ. ಮೆರವಣಿಗೆ ಮುಗಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಭಾನುವಾರ ಮುಂಜಾನೆ 5.30ಕ್ಕೆ ವಾಪಾಸ್‌ ಬರುವಾಗ ಪಲ್ಲಕ್ಕಿಗೆ ರಸ್ತೆ ಬದಿಯ ವಿದ್ಯುತ್‌ ತಂತಿ ತಾಕುತ್ತಿತ್ತು. ಈ ವೇಳೆ ರಂಗನಾಥ್‌ ಮತ್ತು ಹರಿಬಾಬು ಮರದ ಕೋಲಿನಿಂದ ವಿದ್ಯುತ್‌ ತಂತಿಯನ್ನು ಮೇಲಕ್ಕೆ ಎತ್ತಲು ಮುಂದಾದ ಪರಿಣಾಮ ಏಕಾಏಕಿ ವಿದ್ಯುತ್‌ ಪ್ರವಹಿಸಿ ಇಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.

ಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಾಣೆ; ಏರ್‌ ಇಂಡಿಯಾ ಗಗನಸಖಿ ಸೆರೆ!

ತಕ್ಷಣ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಇಬ್ಬರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಎಲೆಕ್ಟ್ರಾನಿಕ್‌ಸಿಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ