*  ಯೂಟ್ಯೂಬ್‌ ನೋಡಿ ಎಟಿಎಂಗೆ ಕನ್ನ: ಇಬ್ಬರು ಖದೀಮರ ಬಂಧನ*  ಜನಸಂಚಾರವಿಲ್ಲದ ಎಟಿಎಂಗಳೇ ಟಾರ್ಗೆಟ್‌*  ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದೆಹಲಿಗೆ ತೆರಳಿ ಆರೋಪಿಗಳ ಬೆನ್ನತ್ತಿದ್ದ ಪೊಲೀಸರು  

ಬೆಂಗಳೂರು(ಅ.24):  ವಾರಾಂತ್ಯದ ವೇಳೆ ಎಟಿಎಂಗಳಿಗೆ(ATM) ಕನ್ನ ಹಾಕುತ್ತಿದ್ದ ಇಬ್ಬರು ಕುಖ್ಯಾತ ಅಂತರ್‌ ರಾಜ್ಯ ಎಟಿಎಂ ಖದೀಮರು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಹರ್ಯಾಣ(Haryana) ಮೂಲದ ಸಮರ್‌ಜಿತ್‌ ಸಿಂಗ್‌ ಹಾಗೂ ರಾಜ್‌ಕುಮಾರ್‌ (35) ಬಂಧಿತರು(Arrest). ಆರೋಪಿಗಳಿಂದ(Accused) 11 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಕೆನರಾ ಬ್ಯಾಂಕ್‌ ಎಟಿಎಂಗೆ ಕನ್ನ ಹಾಕಿ 17 ಲಕ್ಷ ದೋಚಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು(Police), ದೆಹಲಿ(Delhi) ಹಾಗೂ ಬೆಂಗಳೂರಿನಲ್ಲಿ(Bengaluru) ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೂಟ್ಯೂಬ್‌ ನೋಡಿ ಎಟಿಎಂಗೆ ಕನ್ನ:

ಹರ್ಯಾಣದ ಸಮರ್‌ಜಿತ್‌ ಹಾಗೂ ರಾಜ್‌ ಕುಮಾರ್‌ ವೃತ್ತಿಪರ ಎಟಿಎಂ ಕಳ್ಳರಾಗಿದ್ದು, ಈ ಇಬ್ಬರ ವಿರುದ್ಧ ಬೆಂಗಳೂರು ಹಾಗೂ ಹೈದರಾಬಾದ್‌(Hyderabad) ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಯೂಟ್ಯೂಬ್‌(YouTube) ನೋಡಿ ಎಟಿಎಂನಲ್ಲಿ ಹಣ ದೋಚುವುದನ್ನು ಕರಗತ ಮಾಡಿಕೊಂಡಿದ್ದ ಆರೋಪಿಗಳು, ದೆಹಲಿಯಿಂದ ವಿಮಾನದಲ್ಲಿ(Flight) ನಗರಕ್ಕೆ ಬಂದು ಕೆಲ ದಿನಗಳು ಉಳಿಯುತ್ತಿದ್ದರು. ಈ ಅವಧಿಯಲ್ಲಿ ಹೋಟೆಲ್‌ನಲ್ಲಿ ತಾತ್ಕಾಲಿಕವಾಗಿ ನೆಲೆಸಿ ವಾರಾಂತ್ಯದಲ್ಲಿ ಎಟಿಎಂಗಳಿಗೆ ಅವರು ಕನ್ನ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸರ್ಕಾರಿ ಬಸ್‌ ಎಗರಿಸಿ ಡೀಸೆಲ್‌ ಖಾಲಿಯಾದ ಬಳಿಕ ಬಿಟ್ಟೋದರು!

ಹಣ ಡ್ರಾ ಆಗದಂತೆ ಕೇಬಲ್‌ ಕಟ್‌:

ಜನಸಂಚಾರ ಕಡಿಮೆ ಇರುವ ಪ್ರದೇಶದ ಎಟಿಎಂಗಳನ್ನು ಗುರುತಿಸುತ್ತಿದ್ದರು. ಬಳಿಕ ನಿಗದಿತ ಎಟಿಎಂ ಘಟಕದ ಸುತ್ತಮುತ್ತ ಕೆಲ ದಿನಗಳು ಸುತ್ತಾಡಿ ಅಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲಿಸಿ ಸಂಚು ರೂಪಿಸುತ್ತಿದ್ದರು. ಬಳಿಕ ಆ ಎಟಿಎಂ ಕೇಂದ್ರಕ್ಕೆ ಬುಧವಾರ ತೆರಳಿ ಯಂತ್ರದಲ್ಲಿ ಇಂಟರ್‌ನೆಟ್‌(Internet) ಸಂಪರ್ಕಿಸುವ ಕೇಬಲ್‌ಗಳನ್ನು ತುಂಡು ಮಾಡುತ್ತಿದ್ದರು. ಆ ಎಟಿಎಂನಲ್ಲಿ ತಾಂತ್ರಿಕ ಸಮಸ್ಯೆಯನ್ನು ಎಟಿಎಂ ನಿರ್ವಹಣಾ ಏಜೆನ್ಸಿ ನಿರ್ವಹಿಸುತ್ತಿತ್ತು. ಇದೇ ರೀತಿ ಮೂರು ದಿನಗಳ ಕಾಲ ಪದೇ ಪದೇ ತಾಂತ್ರಿಕ ಸಮಸ್ಯೆ ಉಂಟು ಮಾಡುತ್ತಿದ್ದರು. ಇದರಿಂದ ಆ ಎಟಿಎಂನಲ್ಲಿ ಹೆಚ್ಚಿನ ಹಣ ಡ್ರಾ ಆಗದೆ ಹಣ ಉಳಿಯುತ್ತಿತ್ತು. ಕೊನೆಗೆ ಶನಿವಾರ ರಾತ್ರಿ ಆ ಎಟಿಎಂನಲ್ಲಿ ಹಣ ತುಂಬಿದ್ದ ಪೆಟ್ಟಿಗೆಯನ್ನು ಗ್ಯಾಸ್‌ ಕಟ್ಟರ್‌ನಲ್ಲಿ ತುಂಡು ಮಾಡಿ ಹಣ ದೋಚಿ ಆರೋಪಿಗಳು ಪರಾರಿಯಾಗುತ್ತಿದ್ದರು. ದುರಸ್ತಿ ಕಾರಣಕ್ಕೆ ಎಟಿಎಂ ಕಳ್ಳತನ ಕೃತ್ಯ ಬ್ಯಾಂಕ್‌ಗೆ ಗಮನಕ್ಕೆ ಬರಲು ತಡವಾಗುತ್ತಿತ್ತು. ಈ ಕೃತ್ಯ ಎಸಗಿದ ಕೂಡಲೇ ಕ್ಯಾಬ್‌ ಬುಕ್‌ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ತೆರಳಿ ದೆಹಲಿಗೆ ವಿಮಾನದಲ್ಲಿ ಮರಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಅದೇ ರೀತಿ ಆ.20ರಂದು ಉತ್ತರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್‌(Canara Bank) ಎಟಿಎಂಗೆ ಆರೋಪಿಗಳು ಕನ್ನ ಹಾಕಿದ್ದರು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದೆಹಲಿಗೆ ತೆರಳಿ ಆರೋಪಿಗಳ ಬೆನ್ನತ್ತಿದ್ದರು. ಆದರೆ ಅಲ್ಲಿ ಸಮರ್‌ಜಿತ್‌ ಬಂಧಿತನಾದರೆ, ಮತ್ತೊಬ್ಬ ಯಶವಂತಪುರಕ್ಕೆ ಬಂದು ಮತ್ತೊಂದು ಎಟಿಎಂ ಕನ್ನ ಮಾಡುವ ತಯಾರಿಯಲ್ಲಿದ್ದಾಗ ಪತ್ತೆಯಾದ ಎಂದು ಪೊಲೀಸರು ಹೇಳಿದ್ದಾರೆ.

ಬೇಲ್‌ ಕೊಡಿಸಿದ ಸಮರ್‌ಜಿತ್‌

ಕೆನರಾ ಬ್ಯಾಂಕ್‌ ಎಟಿಎಂನಲ್ಲಿ ದೋಚಿದ್ದ .17 ಲಕ್ಷ ರು ಹಣದಲ್ಲಿ 6 ಲಕ್ಷ ಹಣವನ್ನು ಆರೋಪಿಗಳು ಖರ್ಚು ಮಾಡಿದ್ದರು. ತನ್ನ ಸಹಚರನ ಜಾಮೀನಿಗೆ(Bail) ಸಮರ್‌ಜಿತ್‌ 1 ಲಕ್ಷ ವ್ಯಯಿಸಿದ್ದ. ಅಲ್ಲದೆ .1 ಲಕ್ಷ ನೀಡಿ ಆರೋಪಿಗಳು ಮೊಬೈಲ್‌(Mobile) ಖರೀದಿಸಿದ್ದರು. ಇನ್ನುಳಿದ ಹಣವನ್ನು ಮೋಜು ಮಸ್ತಿಗೆ ವ್ಯಯಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.