*  ಖಚಿತ ಮಾಹಿತಿ ಮೇರೆಗೆ ದಾಳಿ *  ಕೆ.ಜಿ.ಗೆ 25 ಸಾವಿರ ರು. ಮಾರಾಟ * ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲು  

ಬೆಂಗಳೂರು(ಫೆ.15): ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಕೊಪ್ಪ ಮುಖ್ಯರಸ್ತೆಯ ಆಸೀಫ್‌ ಶೇಖ್‌(30) ಮತ್ತು ಉಲ್ಲಹಳ್ಳಿ ಗೇಟ್‌ನ ಶಿವರಾಜ್‌(26) ಬಂಧಿತರು. ಆರೋಪಿಗಳಿಂದ(Accused) 4 ಲಕ್ಷ ರು. ಮೌಲ್ಯದ 15 ಕೆ.ಜಿ. ಗಾಂಜಾ(Marijuana) ಹಾಗೂ ಮೂರು ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಇತ್ತೀಚೆಗೆ ಬಾಣಸವಾಡಿ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತರು ಚಿಕ್ಕ ಪೊಟ್ಟಣಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಒಡಿಶಾದಲ್ಲಿ ಕೆ.ಜಿ.ಗೆ 10 ಸಾವಿರ ರು. ನೀಡಿ ಗಾಂಜಾ ಖರೀದಿಸಿ ನಗರಕ್ಕೆ ತರುತ್ತಿದ್ದರು. ಬಳಿಕ ನಗರದ ವಿವಿಧೆಡೆ ಗ್ರಾಹಕರನ್ನು ಹುಡುಕಿ ಕೆ.ಜಿ.ಗೆ 25 ಸಾವಿರ ರು. ಪಡೆದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Bengaluru Crime: ಪ್ರಿಯಾಂಕ್‌ ಖರ್ಗೆ ಪತ್ನಿ ಮೊಬೈಲ್‌ ಕದ್ದಿದ್ದವರ ಸೆರೆ

ಚರಂಡಿಗಳಲ್ಲಿ ಡ್ರಗ್ಸ್‌ ಬಚ್ಚಿಡುತ್ತಿದ್ದ ಪೆಡ್ಲರ್‌ ಸೆರೆ

ಬೆಂಗಳೂರು(Bengaluru): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು(Drugs) ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಡ್ರಗ್ಸ್‌ ಪೆಡ್ಲರ್‌ಗಳನ್ನು(Drugs Peddlers) ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 13.30 ಕೆ.ಜಿ.ತೂಕದ ಗಾಂಜಾ ಹಾಗೂ 2,100 ರು. ನಗದು ಜಪ್ತಿ ಮಾಡಿದ್ದಾರೆ.

ನಂದಿನಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಲಕ್ಷ್ಮೇದೇವಿನಗರದ ಮೇಲ್ಸೇತುವೆ ಕೆಳಗೆ ಇತ್ತೀಚೆಗೆ ಮೂವರು ಅಪರಿಚಿತರು ಬ್ಯಾಗ್‌ ನೇತು ಹಾಕಿಕೊಂಡು ಚಿಕ್ಕ ಪೊಟ್ಟಣಗಳಲ್ಲಿ ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು, ಒಡಿಶಾ ಮೂಲದ ಶಿಬ್‌ರಾಜ್‌(24), ಜಾಲದ ರಾಘವೇಂದ್ರ(22) ಹಾಗೂ ನಾಗೇಶ್‌(23) ಎಂಬುವವರನ್ನು ಬಂಧಿಸಿದ್ದಾರೆ(Arrest). ಆರೋಪಿಗಳಿಂದ 10 ಕೆ.ಜಿ. ತೂಕದ ಗಾಂಜಾ ಹಾಗೂ 1,500 ರು. ನಗದು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚರಂಡಿಯಲ್ಲಿ ಗಾಂಜಾ:

ಒಡಿಶಾದ ಶಿಬ್‌ರಾಜ್‌ ನಗರದ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌(Security Guard) ಆಗಿ ಕೆಲಸ ಮಾಡುತ್ತಿದ್ದ. ಆಗಾಗ ಸ್ವಂತ ಊರಿಗೆ ಹೋಗಿ ಬರುತ್ತಿದ್ದ. ಊರಿಗೆ ಹೋದಾಗ ಅಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಗಾಂಜಾ ಖರೀದಿಸಿ ಬಳಿಕ ಅದು ವಾಸನೆ ಬಾರದ ಹಾಗೆ ಪ್ಯಾಕ್‌ ಮಾಡಿ ಲಗೇಜ್‌ ಬ್ಯಾಗ್‌ಗಳ ಕೆಳಭಾಗದಲ್ಲಿ ಬಚ್ಚಿಟ್ಟು ರೈಲಿನ ಮೂಲಕ ನಗರಕ್ಕೆ ತರುತ್ತಿದ್ದ. ಬಳಿಕ ಆರೋಪಿಗಳಾದ ರಾಘವೇಂದ್ರ ಹಾಗೂ ನಾಗೇಶ್‌ ಸಹಾಯದಿಂದ ನಗರ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳ ಚರಂಡಿಗಳನ್ನು ಗುರುತಿಸಿ ಗಾಂಜಾವನ್ನು ಬಚ್ಚಿಡುತ್ತಿದ್ದ. ಬಳಿಕ ಮೂವರು ಆರೋಪಿಗಳು ಗಿರಾಕಿಗಳನ್ನು ಹುಡುಕಿ ದುಬಾರಿ ದರಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Drugs Case: ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಮೂವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ಕುಖ್ಯಾತ ಲೇಡಿ ಪೆಡ್ಲರ್‌ ಸಾಕು ಮಗ

ಮತ್ತೊಂದು ಪ್ರಕರಣದಲ್ಲಿ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಷರೀಫ್‌ ನಗರದಲ್ಲಿ ಅಪರಿಚಿತರಿಬ್ಬರು ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಷರೀಫ್‌ನಗರದ ನೂರುಲ್ಲಾ ಅಲಿಯಾಸ್‌ ಶಿವಕುಮಾರ್‌(40) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 3.30 ಕೆ.ಜಿ. ತೂಕದ ಗಾಂಜಾ ಹಾಗೂ 600 ರು. ನಗದು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಟೋದಲ್ಲಿ ಪಾರ್ಸೆಲ್‌:

ಆರೋಪಿ ನೂರುಲ್ಲಾ ಒಂದು ಕಾಲದ ಬೆಂಗಳೂರಿನ ಕುಖ್ಯಾತ ಲೇಡಿ ಡ್ರಗ್‌ ಪೆಡ್ಲರ್‌ ಫರಿದಾ ಎಂಬಾಕೆಯ ಸಾಕು ಮಗ. ಈ ಹಿಂದೆ ಫರಿದಾಳನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಕೆಲ ವರ್ಷಗಳ ಹಿಂದೆ ಆಕೆ ಮೃತಟ್ಟಿದ್ದಳು. ಆಕೆಯ ಗರಡಿಯಲ್ಲಿ ಬೆಳೆದಿರುವ ನೂರುಲ್ಲಾ ಮಾದಕವಸ್ತು ಮಾರಾಟದ ದಂಧೆ ಮುಂದುರಿಸಿದ್ದ. ಆರೋಪಿಯು ಕಡಿಮೆ ದರಕ್ಕೆ ಗಾಂಜಾ ಖರೀದಿಸಿ, ಬಳಿಕ ಚಿಕ್ಕ ಪೊಟ್ಟಣಗಳಿಗೆ ತುಂಬಿ ಗಿರಾಕಿಗಳಿಗೆ ದುಬಾರಿ ಮೊತ್ತಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಬಾಡಿಗೆ ಆಟೋರಿಕ್ಷಾ ಚಾಲಕನಿಗೆ ಹೆಚ್ಚಿನ ಬಾಡಿಗೆ ಕೊಡುವುದಾಗಿ ಕೆ.ಆರ್‌.ಪುರಂ ಸೇರಿದಂತೆ ವಿವಿಧ ಕಡೆಯ ವಿಳಾಸ ಕೊಟ್ಟು ಗಾಂಜಾ ಪಾರ್ಸೆಲ್‌ ತರಿಸುತ್ತಿದ್ದ. ಈ ಸಂಬಂಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.