ಪಾರ್ಸೆಲ್‌ ಪೊಟ್ಟಣದಲ್ಲಿ ಒಂದು ತುಂಡು ಕಬಾಬ್‌ ಕಡಿಮೆ ಇದ್ದ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಯುವಕರು ಹೋಟೆಲ್‌ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ಜ.20): ಪಾರ್ಸೆಲ್‌ ಪೊಟ್ಟಣದಲ್ಲಿ ಒಂದು ತುಂಡು ಕಬಾಬ್‌ ಕಡಿಮೆ ಇದ್ದ ವಿಚಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಯುವಕರು ಹೋಟೆಲ್‌ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಣನಗುಂಟೆ ಸಮೀಪದ ಈಶ್ವರ್‌ ಲೇಔಟ್‌ನಲ್ಲಿ ಬುಧವಾರ ತಡರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದೆ. ಹಲ್ಲೆಗೆ ಒಳಗಾಗಿರುವ ಹೋಟೆಲ್‌ ಮಾಲಿಕ ಬಾಬು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಅಭಿ ಮತ್ತು ಮನು ಎಂಬುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಬು ಅವರು ಹಲವು ವರ್ಷಗಳಿಂದ ಮಾಂಸಹಾರಿ ಹೋಟೆಲ್‌ ನಡೆಸುತ್ತಿದ್ದಾರೆ. 

ಬುಧವಾರ ರಾತ್ರಿ ಆರೋಪಿಗಳು ಬಾಬು ಅವರ ಹೋಟೆಲ್‌ಗೆ ಬಂದು .120 ಪಾವತಿಸಿ ಒಂದು ಪ್ಲೇಟ್‌ ಕಬಾಬ್‌ ಪಾರ್ಸೆಲ್‌ ಪಡೆದಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್‌ ಪೊಟ್ಟಣ ತೆರೆದು ನೋಡಿದಾಗ ಕಬಾಬ್‌ 10 ಪೀಸ್‌ ಬದಲು 9 ಪೀಸ್‌ ಇರುವುದು ಕಂಡು ಬಂದಿದೆ. ಬಳಿಕ ಇಬ್ಬರು ಆರೋಪಿಗಳು ಹೋಟೆಲ್‌ ಬಳಿಗೆ ಬಂದು ಒಂದು ಪೀಸ್‌ ಕಬಾಬ್‌ ಕಡಿಮೆ ಇರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್‌ ಮಾಲಿಕ ಬಾಬು ಜತೆಗೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಈ ವೇಳೆ ಆರೋಪಿಗಳು ಬಾಬು ಅವರ ಮುಖಕ್ಕೆ ಕೈನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಗಾಯಾಳು ಬಾಬು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ ಆರೋಪ: ಪೊಲೀಸರ ವಿಚಾರಣೆಯಿಂದ ಮನನೊಂದ ಯುವಕ ಆತ್ಮಹತ್ಯೆ

ಅಕ್ರಮ ಸಂಗ್ರಹಿಸಿದ ಹುಲಿ ಹಲ್ಲು ವಶ: ಅಕ್ರಮವಾಗಿ ಸಂಗ್ರಹಿಸಿದ ಹುಲಿ ಹಲ್ಲು ಮತ್ತು ಉಗುರುಗಳನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂಡೆ ಕುರುಬರ ದೊಡ್ಡಿಗ್ರಾಮದ ಗೋಪಾಲ (36) ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದ ಹನುಮೇಶ್‌ (30) ಬಂಧಿತರು. ಇಬ್ಬರು ಆರೋಪಿಗಳು ಪಿ.ಜಿ.ಪಾಳ್ಯ ಅಡ್ದ ರಸ್ತೆಯಲ್ಲಿ ಬೈಕ್‌ನಲ್ಲಿ 40 ಹುಲಿ ಉಗುರು, ಎರಡು ಹುಲಿ ಹಲ್ಲುಗಳನ್ನು ಮಾರಾಟಕ್ಕೆ ಕೊಳ್ಳೇಗಾಲದ ಕಡೆ ತೆರಳುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅರಣ್ಯ ಸಂಚಾರಿ ದಳದ ಪಿಎಸೈ ವಿಜಯ ರಾಜ, ಮುಖ್ಯಪೇದೆ ರಾಮಚಂದ್ರ, ಸ್ವಾಮಿ, ತಖೀವುಲ್ಲ, ಬಸವರಾಜು, ಶಂಕರ್‌, ಬಸವರಾಜ, ಚಾಲಕ ಪ್ರಭಾಕರ್‌ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಕಾನೂನು ಪಾಲಿಸಿದರೆ ಕ್ರಿಪ್ಟೊ ಕರೆನ್ಸಿಯಿಂದ ಸಮಸ್ಯೆಯಿಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಪಿಜಿ ಪಾಳ್ಯ ಅರಣ್ಯವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ 2 ಹುಲಿ ಸತ್ತು ಬಿದ್ದಿತ್ತು. ಅದರ ಹಲ್ಲು ಮತ್ತು ಉಗುರುಗಳನ್ನು ನಾವು ತೆಗೆದು ಇಟ್ಟುಕೊಂಡಿದ್ದೇವೆ ಎಂಬ ಹೇಳಿಕೆ ನೀಡಿದ್ದು ಹುಲಿಗಳು ನಿಜಕ್ಕೂ ಸತ್ತಿದ್ದವೆ, ಇಲ್ಲ ಆರೋಪಿಗಳ ಗುಂಪು ಕಟ್ಟಿಕೊಂಡು ಹಣ ದಾಸೆಗೆ ಹುಲಿಗಳ ಹತ್ಯೆ ಮಾಡ್ದಿದ್ದಾರೆಯೆ ಎಂಬುದು ಮುಂದಿನ ತನಿಖೆ ತಿಳಿಯಬೇಕಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರಿ ದಳದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯದ ಅನುಮತಿ ಮೇರೆಗೆ ಗೋಪಾಲನನ್ನು ವಶಕ್ಕೆ ಪಡೆಯಲಾಗಿದೆ.